ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸ ಮೂರು ಟೋಲ್ ಗೇಟ್ ಸ್ಥಾಪಿಸಲು ಸರ್ಕಾರ ನಿರ್ಧಾರ: ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತ

Prakhara News
1 Min Read

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಟೋಲ್‌ಗೇಟ್‌ಗಳ ಹೆಚ್ಚಳಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಕೇವಲ 60 ಕಿಲೋಮೀಟರ್ ವ್ಯಾಪ್ತಿಯಲ್ಲಿ ಈಗಾಗಲೇ 3 ಟೋಲ್‌ಗೇಟ್‌ಗಳು ಕಾರ್ಯನಿರ್ವಹಿಸುತ್ತಿರುವುದರ ನಡುವೆಯೇ, ಇನ್ನೂ 3 ಟೋಲ್‌ಗೇಟ್‌ಗಳನ್ನು ಸ್ಥಾಪಿಸಲು ಸರ್ಕಾರ ಮುಂದಾಗಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮದ ಪ್ರಕಾರ, ಒಂದು ಟೋಲ್‌ಗೇಟ್‌ನಿಂದ ಮತ್ತೊಂದು ಟೋಲ್‌ಗೇಟ್‌ಗೆ ಕನಿಷ್ಠ 60 ಕಿ.ಮೀ ಅಂತರ ಇರಬೇಕು. ಆದರೆ ಬಂಟ್ವಾಳದ ಬ್ರಹ್ಮರಕೂಟ್ಲು ಟೋಲ್‌ಗೇಟ್‌ನಿಂದ ಸುಮಾರು 30 ಕಿ.ಮೀ ಅಂತರದಲ್ಲಿ ತಲಪಾಡಿ ಟೋಲ್‌ಗೇಟ್ ಮತ್ತು 42 ಕಿ.ಮೀ ಅಂತರದಲ್ಲಿ ಹೆಜಮಾಡಿ ಟೋಲ್‌ಗೇಟ್ ಇರುವುದರಿಂದ ನಿಯಮ ಉಲ್ಲಂಘನೆ ಆಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇದರ ನಡುವೆಯೇ ವಳಾಲು, ಪಣಕಜೆ ಮತ್ತು ಗಂಜಿಮಠ ಪ್ರದೇಶಗಳಲ್ಲಿ ಹೊಸ ಟೋಲ್‌ಗೇಟ್‌ಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಯೋಜನೆ ಜಾರಿಗೆ ಬಂದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಒಟ್ಟು 6 ಟೋಲ್‌ಗೇಟ್‌ಗಳು ಕಾರ್ಯನಿರ್ವಹಿಸುವ ಸಾಧ್ಯತೆ ಇದೆ. ಕಳೆದ 23 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಬ್ರಹ್ಮರಕೂಟ್ಲು ಟೋಲ್‌ಗೇಟ್ ತೆರವುಗೊಳಿಸುವಂತೆ ಸ್ಥಳೀಯರು ಆಗ್ರಹಿಸುತ್ತಿದ್ದು, ಟೋಲ್‌ಗೇಟ್‌ಗಳ ಮೂಲಕ ನಡೆಯುತ್ತಿರುವ “ಹಗಲು ದರೋಡೆ”ಯ ವಿರುದ್ಧ ಜನರು ಈಗ ಬಹಿರಂಗವಾಗಿ ಸಿಡಿದೆದ್ದಿದ್ದಾರೆ. ಒಟ್ಟಿನಲ್ಲಿ, ನಿಯಮ ಉಲ್ಲಂಘನೆ ಆರೋಪಗಳ ನಡುವೆ ಟೋಲ್‌ಗೇಟ್‌ಗಳ ಹೆಚ್ಚಳಕ್ಕೆ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಮುಂದಿನ ದಿನಗಳಲ್ಲಿ ಈ ವಿಚಾರ ಮತ್ತಷ್ಟು ಚರ್ಚೆಗೆ ಗ್ರಾಸವಾಗುವ ಸಾಧ್ಯತೆ ಇದೆ.

Share This Article
Leave a Comment