ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 34ನೇ ಕದ್ರಿ ಶಿವಭಾಗ್ ವಾರ್ಡಿನ ಬಿಕರ್ನಕಟ್ಟೆ ನಾಗಬ್ರಹ್ಮ ದೈವಸ್ಥಾನದ ಹತ್ತಿರ ತಡೆಗೋಡೆ ನಿರ್ಮಾಣ ಕಾಮಗಾರಿಯು ಲೋಕೋಪಯೋಗಿ ಇಲಾಖೆಯ ರೂ. 30ಲಕ್ಷ ವಿಶೇಷ ಅನುದಾನದಲ್ಲಿ ನಡೆಯಲಿದ್ದು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಗುದ್ದಲಿ ಪೂಜೆಯು ನಡೆಯಿತು.


ನಂತರ ಮಾತನಾಡಿದ ಶಾಸಕರು, ಮಳೆಗಾಲದಲ್ಲಿ ಈ ಪ್ರದೇಶಕ್ಕೆ ತೊಂದರೆ ಉಂಟಾಗುತ್ತಿದ್ದ ಬಗ್ಗೆ ಸ್ಥಳೀಯರು ಮಾಡಿದ ಮನವಿಗೆ ಅನುಗುಣವಾಗಿ, ಪದವು ಮೇಗಿನ ಮನೆ ನಾಯ್ಗರ ಮನೆತನದ ರಸ್ತೆಗೆ ತಾಗಿರುವ ರಾಜಕಾಲುವೆಗೆ ತಡೆಗೋಡೆ ಕಾಮಗಾರಿ ನಡೆಯಲಿದೆ. ಇಂದು ಕ್ಷೇತ್ರದ ಅಭಿವೃದ್ಧಿಗೆ ನೂರಾರು ಕೋಟಿ ಅನುದಾನಗಳ ಅಗತ್ಯವಿದ್ದರೂ ರಾಜ್ಯ ಸರಕಾರದಿಂದ ಯಾವುದೇ ಬೆಂಬಲ ದೊರೆಯುತ್ತಿಲ್ಲ. ಹಾಗಾಗಿ ಇರುವ ಅತ್ಯಲ್ಪ ಅನುದಾನಗಳನ್ನೇ ಬಳಸಿಕೊಂಡು ಅತೀ ಅಗತ್ಯವಿರುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು ಶೀಘ್ರದಲ್ಲಿ ಇದು ಪೂರ್ಣಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ವೇಳೆ ನಿಕಟಪೂರ್ವ ಪಾಲಿಕೆ ಸದಸ್ಯೆ ಶ್ರೀಮತಿ ಕಾವ್ಯ ನಟರಾಜ್ ಆಳ್ವ, ವಾರ್ಡ್ ಅಧ್ಯಕ್ಷರಾದ ವಿಕ್ರಂ ಚೌಟ, ಯೋಗಿಶ್ ಶೆಣೈ, ನವೀನ್ ಶೆಣೈ, ಗೋಪಾಲಕೃಷ್ಣ ಶೆಣೈ, ಶಿವರಾಮ್ ಭಂಡಾರಿ, ದಿನೇಶ್ ಶೆಣೈ, ರಾಮಚಂದ್ರ ಚೌಟ, ಹರೀಶ್ ಪ್ರಭು, ಡಾ. ಯು. ಡಿ ನಾಯಕ್, ಉಮೇಶ್ ಶೆಣೈ, ರಾಜೇಶ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.



