ಉಳ್ಳಾಲ : 114 ವರ್ಷಗಳ ಸೇವಾ ಪರಂಪರೆಯನ್ನು ಹೊಂದಿರುವ ಎಂಸಿಸಿ ಬ್ಯಾಂಕ್ ತನ್ನ 22ನೇ ಶಾಖೆಯನ್ನು ದೇರಳಕಟ್ಟೆಯಲ್ಲಿ ಆರಂಭಿಸುವ ಮೂಲಕ ಕರಾವಳಿ ಭಾಗದ ಬ್ಯಾಂಕಿಂಗ್ ಸೇವೆಯನ್ನು ಮತ್ತಷ್ಟು ವಿಸ್ತರಿಸಿದೆ. ಫಾದರ್ ಮುಲ್ಲರ್ಸ್ ಕಾಂಪ್ಲೆಕ್ಸ್ನ ನೆಲಮಹಡಿಯಲ್ಲಿ ಭಾನುವಾರ ನೂತನ ಶಾಖೆ, ಎಟಿಎಂ ಹಾಗೂ ಭದ್ರತಾ ಕೊಠಡಿಯನ್ನು ಉದ್ಘಾಟಿಸಿ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.


ಭದ್ರತಾ ಕೊಠಡಿಯನ್ನು ಉದ್ಘಾಟಿಸಿದ ಅರ್ಸುಲೈನ್ ಫ್ರಾನ್ಸಿಸ್ಕನ್ ಸಿಸ್ಟರ್ಸ್ನ ಸುಪೀರಿಯರ್ ಜನರಲ್ ಸಿ. ಮಿಲ್ಲಿ ಫೆರ್ನಾಂಡಿಸ್ ಮಾತನಾಡಿ, ಸರ್ಕಾರದ ವಿವಿಧ ಜನಪರ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವಲ್ಲಿ ಬ್ಯಾಂಕ್ಗಳು ಪ್ರಮುಖ ಪಾತ್ರ ವಹಿಸುತ್ತಿವೆ. ವಿದ್ಯಾರ್ಥಿಗಳ ಉಳಿತಾಯದ ಅಭ್ಯಾಸ ಬೆಳೆಸುವುದು, ಹಿರಿಯ ನಾಗರಿಕರಿಗೆ ಪಿಂಚಣಿ ಸೌಲಭ್ಯಗಳನ್ನು ಸುಲಭವಾಗಿ ಒದಗಿಸುವುದು, ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಸಾಲ ಹಾಗೂ ಉಳಿತಾಯ ಯೋಜನೆಗಳ ಮೂಲಕ ಬೆಂಬಲ ನೀಡುವುದು ಬ್ಯಾಂಕ್ಗಳ ಪ್ರಮುಖ ಜವಾಬ್ದಾರಿಯಾಗಿದೆ ಎಂದರು.

ಪಾನೀರ್ನ ಅವರ್ ಲೇಡಿ ಆಫ್ ಮರ್ಸಿ ಚರ್ಚ್ನ ಧರ್ಮಗುರು ಫಾ. ವಿಕ್ಟರ್ ಡಿಮೆಲ್ಲೊ ಮಾತನಾಡಿ, ಎಂಸಿಸಿ ಬ್ಯಾಂಕ್ ಪಾರದರ್ಶಕತೆ ಮತ್ತು ವಿಶ್ವಾಸಾರ್ಹ ಸೇವೆಯಿಂದ ಜನರ ನಂಬಿಕೆ ಗಳಿಸಿರುವ ಸಂಸ್ಥೆಯಾಗಿದೆ ಎಂದು ಹೇಳಿದರು. ಗ್ರಾಹಕರೇ ಬ್ಯಾಂಕ್ನ ನಿಜವಾದ ಆಧಾರವಾಗಿದ್ದು, ಅವರ ಉಡುಗೆ ಅಥವಾ ಬಾಹ್ಯ ರೂಪವನ್ನಲ್ಲ, ಸಮಾನ ಗೌರವದಿಂದ ಸೇವೆ ನೀಡಬೇಕು ಎಂದು ಸಿಬ್ಬಂದಿಗೆ ಸಲಹೆ ನೀಡಿದರು. ಹೊಸ ಶಾಖೆ ದೇವರ ಆಶೀರ್ವಾದದೊಂದಿಗೆ ಯಶಸ್ವಿಯಾಗಿ ಬೆಳೆಯಲಿ ಎಂದು ಹಾರೈಸಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ಮಾತನಾಡಿ, ಮುಂದಿನ ಆರು ತಿಂಗಳೊಳಗೆ ದೇರಳಕಟ್ಟೆ ಶಾಖೆಯಲ್ಲಿ ₹10 ಕೋಟಿ ವ್ಯವಹಾರ ಸಾಧಿಸುವ ಗುರಿ ಹೊಂದಿದ್ದೇವೆ ಎಂದರು. 2018ರಲ್ಲಿ ₹500 ಕೋಟಿ ವ್ಯವಹಾರ ಹೊಂದಿದ್ದ ಬ್ಯಾಂಕ್ ಇಂದು ₹1,530 ಕೋಟಿ ವ್ಯವಹಾರಕ್ಕೆ ಬೆಳೆದಿದ್ದು, ಇದು ಗ್ರಾಹಕರ ವಿಶ್ವಾಸ ಮತ್ತು ಸಿಬ್ಬಂದಿಯ ಸಮರ್ಪಣೆಯ ಫಲ ಎಂದು ಹೇಳಿದರು. ಸಹಕಾರ ಬ್ಯಾಂಕ್ ಆಗಿದ್ದರೂ ರಾಷ್ಟ್ರೀಯ ಬ್ಯಾಂಕ್ಗಳ ಮಟ್ಟದ ಸೇವೆಗಳನ್ನು ಒದಗಿಸುತ್ತಿದ್ದು, ರಾಜ್ಯಾದ್ಯಂತ ಸೇವೆ ವಿಸ್ತರಿಸುವ ಯೋಜನೆ ಇದೆ ಎಂದು ತಿಳಿಸಿದರು.
ಭದ್ರತಾ ಕೊಠಡಿಯನ್ನು ಉದ್ಘಾಟಿಸಿದ ಅರ್ಸುಲೈನ್ ಫ್ರಾನ್ಸಿಸ್ಕನ್ ಸಿಸ್ಟರ್ಸ್ನ ಸುಪೀರಿಯರ್ ಜನರಲ್ ಸಿ. ಮಿಲ್ಲಿ ಫೆರ್ನಾಂಡಿಸ್, ಸರ್ಕಾರದ ವಿವಿಧ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಬ್ಯಾಂಕ್ಗಳ ಪಾತ್ರ ಮಹತ್ವದ್ದಾಗಿದೆ. ವಿದ್ಯಾರ್ಥಿಗಳಲ್ಲಿ ಉಳಿತಾಯದ ಅಭ್ಯಾಸ ಬೆಳೆಸುವುದು, ಹಿರಿಯ ನಾಗರಿಕರಿಗೆ ಪಿಂಚಣಿ ಸೌಲಭ್ಯ ಒದಗಿಸುವುದು ಹಾಗೂ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಬ್ಯಾಂಕ್ಗಳು ನೆರವಾಗಬೇಕು ಎಂದು ಹೇಳಿದರು.

ಎಟಿಎಂ ಕೇಂದ್ರವನ್ನು ಉದ್ಘಾಟಿಸಿದ ಫಾದರ್ ಮುಲ್ಲರ್ ಹೋಮಿಯೊಪತಿಕ್ ಕಾಲೇಜಿನ ಆಡಳಿತದಾರ ಫಾ. ನೀಲೆಶ್ ಕ್ರಾಸ್ತಾ ಮಾತನಾಡಿ, ಫಾದರ್ ಮುಲ್ಲರ್ಸ್ ಸಂಸ್ಥೆ ಮತ್ತು ಎಂಸಿಸಿ ಬ್ಯಾಂಕ್ ಎರಡೂ ಸೇವೆ, ವಿಶ್ವಾಸ ಮತ್ತು ಮಾನವೀಯತೆಯ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿವೆ. ಆರ್ಥಿಕ ಭದ್ರತೆ ಉತ್ತಮ ಆರೋಗ್ಯ ಮತ್ತು ಕುಟುಂಬದ ನೆಮ್ಮದಿಗೆ ಅತ್ಯಗತ್ಯವಾಗಿದ್ದು, ಬ್ಯಾಂಕಿಂಗ್ ಸೇವೆಗಳು ಸಮಾಜದ ಅಭಿವೃದ್ಧಿಗೆ ಭದ್ರ ಅಡಿಪಾಯವಾಗಿವೆ ಎಂದರು.
ಕೋಟೆಕಾರು ಪಟ್ಟಣ ಪಂಚಾಯತ್ ಅಧ್ಯಕ್ಷೆ ದಿವ್ಯಾ ಎಸ್. ಶೆಟ್ಟಿ ಮಾತನಾಡಿ, ಎಂಸಿಸಿ ಬ್ಯಾಂಕ್ ಕೇವಲ ಬ್ಯಾಂಕಿಂಗ್ ಸೇವೆಗೆ ಸೀಮಿತವಾಗದೆ ಸಮಾಜಮುಖಿ ಕಾರ್ಯಗಳ ಮೂಲಕ ಜನರ ವಿಶ್ವಾಸ ಗಳಿಸಿದೆ. ಸಮಾಜ ಸೇವಕರನ್ನು ಗುರುತಿಸಿ ಗೌರವಿಸುವ ಹಾಗೂ ಅವರ ಸೇವೆಗೆ ಪ್ರೋತ್ಸಾಹ ನೀಡುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು. ಹೊಸ ಶಾಖೆಯಿಂದ ದೇರಳಕಟ್ಟೆ ಹಾಗೂ ಸುತ್ತಮುತ್ತಲಿನ ಜನರಿಗೆ ಗುಣಮಟ್ಟದ ಬ್ಯಾಂಕಿಂಗ್ ಸೇವೆಗಳು ಇನ್ನಷ್ಟು ಸುಲಭವಾಗಿ ದೊರೆಯಲಿವೆ ಎಂದರು.
ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿನಿ, ವಿವಿಧ ಸಾಮಾಜಿಕ ಸಂಸ್ಥೆಗಳಿಗೆ ಒಟ್ಟು ₹5 ಲಕ್ಷ ಸಹಾಯಧನ ನೀಡಲಾಯಿತು. ದೇರಳಕಟ್ಟೆ–ಪಾನೀರು ಭಾಗದಲ್ಲಿ ಸಮಾಜಸೇವೆಯಲ್ಲಿ ತೊಡಗಿರುವ ಸಾಮಾಜಿಕ ಕಾರ್ಯಕರ್ತರನ್ನು ಸನ್ಮಾನಿಸಲಾಯಿತು.



