ಬೆಂಗಳೂರು: ಪಾದಚಾರಿಯೊಬ್ಬರ ಮೊಬೈಲ್ ಫೋನ್ ಕಸಿದು ದ್ವಿಚಕ್ರ ವಾಹನದಲ್ಲಿ ಪರಾರಿಯಾಗಲು ಯತ್ನಿಸಿದ ಕಳ್ಳನೋರ್ವ, ಸಾರ್ವಜನಿಕರಿಂದ ತಪ್ಪಿಸಿಕೊಳ್ಳಲು ಓಡುವಾಗ ಫುಟ್ಪಾತ್ ಮೇಲೆಯೇ ಕುಸಿದು ಬಿದ್ದು ಮೃತಪಟ್ಟಿರುವ ಅಪರೂಪದ ಘಟನೆ ನಗರದ ಕಬ್ಬನ್ಪೇಟೆ ಸಮೀಪ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.


ಮೃತ ಆರೋಪಿಯನ್ನು ಜುನೈದ್ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿ ಅರ್ಬಾಜ್ ಎಂಬಾತನನ್ನು ಹಲಸೂರು ಗೇಟ್ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.ಮೇ 15ರಂದು ಸಂಜೆ ಕಬ್ಬನ್ಪೇಟೆಯ 14ನೇ ಕ್ರಾಸ್ನಲ್ಲಿ ಪಾದಚಾರಿಯೊಬ್ಬರು ರಸ್ತೆಯಲ್ಲಿ ಮೊಬೈಲ್ ನೋಡುತ್ತಾ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಜುನೈದ್ ಮತ್ತು ಅರ್ಬಾಜ್ ಕ್ಷಣಾರ್ಧದಲ್ಲಿ ಆ ವ್ಯಕ್ತಿಯ ಕೈಯಲ್ಲಿದ್ದ ಫೋನ್ ಕಸಿದು ವೇಗವಾಗಿ ಪರಾರಿಯಾಗಲು ಯತ್ನಿಸಿದ್ದಾರೆ. ತಕ್ಷಣ ಸಂತ್ರಸ್ತ ವ್ಯಕ್ತಿ “ಕಳ್ಳರು.. ಕಳ್ಳರು..” ಎಂದು ಜೋರಾಗಿ ಕಿರುಚಿಕೊಂಡಿದ್ದಾರೆ.ಈ ಧ್ವನಿ ಕೇಳಿ ಎಚ್ಚೆತ್ತ ಎದುರುಗಡೆಯಿಂದ ಬರುತ್ತಿದ್ದ ಕಾರ್ಮಿಕರೊಬ್ಬರು, ಸಮಯಪ್ರಜ್ಞೆ ಮೆರೆದು ತಮ್ಮ ತಲೆಯ ಮೇಲಿದ್ದ ಭಾರವಾದ ಮೂಟೆಯನ್ನು ವೇಗವಾಗಿ ಬರುತ್ತಿದ್ದ ಕಳ್ಳರ ದ್ವಿಚಕ್ರ ವಾಹನದ ಮೇಲಕ್ಕೇ ಎಸೆದಿದ್ದಾರೆ. ಮೂಟೆ ಬಿದ್ದ ರಭಸಕ್ಕೆ ನಿಯಂತ್ರಣ ತಪ್ಪಿದ ಕಳ್ಳರಿಬ್ಬರೂ ಬೈಕ್ ಸಮೇತ ರಸ್ತೆಗೆ ಉರುಳಿಬಿದ್ದಿದ್ದಾರೆ.

ಸುತ್ತಮುತ್ತಲಿನ ಸಾರ್ವಜನಿಕರು ತಮ್ಮನ್ನು ಹಿಡಿಯಲು ಓಡಿ ಬರುವುದನ್ನು ಕಂಡು ಆತಂಕಗೊಂಡ ಖದೀಮರು, ತಾವು ಕದ್ದ ಮೊಬೈಲ್ ಹಾಗೂ ತಮ್ಮದೇ ಬೈಕ್ ಅನ್ನು ರಸ್ತೆಯಲ್ಲೇ ಬಿಟ್ಟು ಕಾಲ್ಕಿತ್ತಿದ್ದಾರೆ. ಈ ಇಡೀ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಆದರೆ, ಸಾರ್ವಜನಿಕರ ಕೈಗೆ ಸಿಗಬಾರದೆಂದು ತೀವ್ರ ಭಯದಿಂದ ಜೋರಾಗಿ ಓಡಿ ಹೋಗುತ್ತಿದ್ದ ಸಂದರ್ಭದಲ್ಲಿ ಜುನೈದ್ ಅತಿಯಾದ ಸುಸ್ತಿನಿಂದ ಫುಟ್ಪಾತ್ ಮೇಲೆ ಕುಳಿತಿದ್ದಾನೆ. ಕುಳಿತ ಮರುಕ್ಷಣವೇ ಆತ ಅಲ್ಲಿಯೇ ಪ್ರಜ್ಞೆ ತಪ್ಪಿ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಮೃತ ಜುನೈದ್ ಮೊದಲಿನಿಂದಲೂ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.ಘಟನೆಗೆ ಸಂಬಂಧಿಸಿದಂತೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿದ್ದ ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.



