ಪುತ್ತೂರು: ಪುತ್ತೂರಿನಲ್ಲಿ ಪುತ್ತಿಲ ಪರಿವಾರ ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹದಲ್ಲಿ ಆರ್ಎಸ್ಎಸ್ ಹಿರಿಯ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಪುತ್ತಿಲ ಪರಿವಾರದ ನಾಯಕ, ಪಾಣಾಜೆಯ ನಾರಾಯಣ ಪ್ರಕಾಶ್ ಅವರು ಕಟು ಶಬ್ದಗಳಲ್ಲಿ ವಾಗ್ದಾಳಿ ನಡೆಸಿದ್ದಾರೆ.


ಧರಣಿಯನ್ನುದ್ದೇಶಿಸಿ ಮಾತನಾಡಿದ ನಾರಾಯಣ ಪ್ರಕಾಶ್, “ಕಳೆದ ಚುನಾವಣೆಯ ಸಂದರ್ಭದಲ್ಲಿ ಪ್ರಾಮಾಣಿಕ ನಾಯಕ ಅರುಣ್ ಕುಮಾರ್ ಪುತ್ತಿಲ ಅವರನ್ನು ಕಲ್ಲಡ್ಕ ಪ್ರಭಾಕರ್ ಭಟ್ ‘ಕಳ್ಳ ಕಳ್ಳ’ ಎಂದು ಕರೆದಿದ್ದರು. ಆದರೆ ನಿಜವಾದ ಕಳ್ಳ ಯಾರು? ಸ್ಕೂಲ್ ಬಸ್ಗೆ ವಿಮೆ ಮಾಡಿಸದ ಕಳ್ಳ ಯಾರು? ವ್ಯಾನ್ಗೆ ವಿಮೆ ಮಾಡಿಸದೆ ಮಗುವಿನ ಸಾವಿಗೆ ಕಾರಣವಾದ ಕಳ್ಳ ಯಾರು?” ಎಂದು ನೇರವಾಗಿ ಪ್ರಶ್ನಿಸಿದರು.

“ಕಲ್ಲಡ್ಕ ಪ್ರಭಾಕರ್ ಭಟ್ ಅವರು ಪಕ್ಷ ಮತ್ತು ಸಂಘಟನೆಯನ್ನು ಸಾಕಷ್ಟು ಬೆಳೆಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ವಾಧಿಕಾರಿ ಧೋರಣೆಯ ಮೂಲಕವೇ ಅಭ್ಯರ್ಥಿಗಳ ಆಯ್ಕೆ ನಡೆಯುತ್ತಿದೆ. ಮನೆಯಲ್ಲೇ ಕುಳಿತು ತಮ್ಮಿಷ್ಟದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ತಕ್ಷಣ ನಿಲ್ಲಬೇಕು. ಹಲವು ವರ್ಷಗಳ ಕಾಲ ಸಂಘಟನೆಗೆ ದುಡಿದದ್ದು ಸಾಕು, ಇನ್ಮುಂದೆ ಹೊಸಬರಿಗೆ ಅವಕಾಶ ಬಿಟ್ಟುಕೊಡಿ,” ಎಂದು ಆಕ್ರೋಶ ಹೊರಹಾಕಿದರು.




