ಮನೆ ಮೇಲ್ಛಾವಣಿ ಕುಸಿದು ಮೂವರು ಸಾವು ಕೇಸ್ : ರಾಜ್ಯ ಸರ್ಕಾರದಿಂದ ತಲಾ ₹5 ಲಕ್ಷ ಪರಿಹಾರ ಘೋಷಣೆ

Prakhara News
1 Min Read

ಮಂಗಳೂರು: ಮಂಗಳೂರಿನಲ್ಲಿ ಬುಧವಾರ ಅತ್ಯಂತ ಹೃತಯವಿದ್ರಾವಕ ಘಟನೆಯೊಂದು ಸಂಭವಿಸಿದೆ. ಕಂಕನಾಡಿ ಸಮೀಪದ ನಾಗೋರಿಯಲ್ಲಿ ನಿರಂತರ ಮಳೆಯಿಂದಾಗಿ ಗುಡ್ಡದ ಮಣ್ಣು ಜಾರಿ ಹೆಂಚಿನ ಮನೆಯೊಂದರ ಮೇಲೆ ಬಿದ್ದಿದೆ. ಮಣ್ಣಿನ ತೀವ್ರ ಒತ್ತಡಕ್ಕೆ ಸಿಲುಕಿ ಮನೆಯ ಮೇಲ್ಛಾವಣಿ ಏಕಾಏಕಿ ಕುಸಿದು ಬಿದ್ದ ಪರಿಣಾಮ, ಓರ್ವ ಮಹಿಳೆ ಹಾಗೂ ಇಬ್ಬರು ಬಾಲಕಿಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಜಡಿಮಳೆಯಿಂದಾಗಿ ಮನೆಯ ಹಿಂಭಾಗದ ಮಣ್ಣು ಸಂಪೂರ್ಣವಾಗಿ ಸಡಿಲಗೊಂಡಿತ್ತು. ಮುಂಜಾನೆ ವೇಳೆ ಈ ಮಣ್ಣು ಜಾರಿ ಬೀಳುತ್ತಿದ್ದಂತೆ ಹಳೆಯ ಹೆಂಚಿನ ಮನೆ ನೆಲಸಮವಾಗಿದೆ. ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಮೂವರನ್ನು ಸ್ಥಳೀಯರು ಮತ್ತು ರಕ್ಷಣಾ ಪಡೆಗಳು ತಕ್ಷಣವೇ ಹೊರತೆಗೆದರೂ ಸಹ, ಅಷ್ಟರಲ್ಲೇ ಅವರ ಪ್ರಾಣ ಪಕ್ಷಿ ಹಾರಿಹೋಗಿತ್ತು.

ಈ ಭೀಕರ ದುರಂತಕ್ಕೆ ತೀವ್ರ ಸಂತಾಪ ಸೂಚಿಸಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಅವರು, ಮೃತರ ಕುಟುಂಬಗಳಿಗೆ ತಲಾ ₹5 ಲಕ್ಷ ರೂಪಾಯಿಗಳ ತುರ್ತು ಪರಿಹಾರವನ್ನು ಘೋಷಿಸಿದ್ದಾರೆ. ಇನ್ನು ಘಟನೆಯಲ್ಲಿ ಗಾಯಗೊಂಡವರಿಗೆ ಜಿಲ್ಲಾಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿದ್ದು, ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಜಿಲ್ಲಾಡಳಿತವೇ ಭರಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Share This Article
Leave a Comment