ಕಾರ್ಕಳ : ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ಉಂಟಾಗಿ ತಮ್ಮನೇ ಅಣ್ಣನನ್ನು ಮರದ ತುಂಡಿನಿಂದ ದ ಹೊಡೆದು ಕೊಲೆ ಮಾಡಿರುವ ಘಟನೆ ತಾಲೂಕಿನ ಮಿತ್ತಬೆಟ್ಟು ಹಿರಿಯಂಗಡಿ ಎಂಬಲ್ಲಿ ಶನಿವಾರ ರಾತ್ರಿ ನಡೆದಿದೆ.


ಸ್ಥಳೀಯ ನಿವಾಸಿ ರಿಚಾರ್ಡ್ ಡಿಸೋಜ (65) ಕೊಲೆಗೀಡಾದವರು. ಇವರು ಮತ್ತು ಇವರ ತಮ್ಮ ಹೆರಾಲ್ಡ್ ಡಿಸೋಜ ಅವರು ಹಿರಿಯಂಗಡಿಯಲ್ಲಿ ವಾಸವಾಗಿದ್ದು, ತಾವು ವಾಸವಿದ್ದ ಮನೆ ಹಾಗೂ ಜಾಗದ ಬಗ್ಗೆ ಇಬ್ಬರ ಮಧ್ಯೆ ದೀರ್ಘಕಾಲದ ತಕರಾರು ಇತ್ತು. ಮೇ 2 ರಂದು ಸಂಜೆ 6 ಗಂಟೆ ಸುಮಾರಿಗೆ ಇದೇ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆದಿದೆ. ಈ ವೇಳೆ ಆಕ್ರೋಶಗೊಂಡ ಹೆರಾಲ್ಡ್ ಡಿಸೋಜ, ಮರದ ರೀಪಿನಿಂದ ಅಣ್ಣ ರಿಚಾರ್ಡ್ಗೆ ಹೊಡೆದು ಕೊಲೆ ಮಾಡಿದ್ದಾನೆ ಎಂದು ಮೃತರ ಪತ್ನಿ ಜೆಸಿಂತ ಡಿಸೋಜ ದೂರಿನಲ್ಲಿ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಹಾಗೂ ಇತರೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಹೆರಾಲ್ಡ್ ಡಿಸೋಜನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.



