ಉಡುಪಿ : ಕಾರು ಢಿಕ್ಕಿ ಹೊಡೆದು 6ನೇ ತರಗತಿ ವಿದ್ಯಾರ್ಥಿ ದುರ್ಮರಣ

Prakhara News
1 Min Read

ಉಡುಪಿ: ಅತಿವೇಗದಿಂದ ಬಂದ ಕಾರೊಂದು ರಸ್ತೆ ದಾಟುತ್ತಿದ್ದ ಬಾಲಕನಿಗೆ ಢಿಕ್ಕಿ ಹೊಡೆದ ಪರಿಣಾಮ, ಗಂಭೀರವಾಗಿ ಗಾಯಗೊಂಡಿದ್ದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಮೇ 15ರ ಶುಕ್ರವಾರ ಮಧ್ಯಾಹ್ನ ನೇಜಾರಿನ ಜ್ಯೋತಿನಗರದಲ್ಲಿ ಸಂಭವಿಸಿದೆ.

ಮೃತ ಬಾಲಕನನ್ನು ಹೂಡೆಯ ಸಾಲಿಹಾತ್ ಆಂಗ್ಲ ಮಾಧ್ಯಮ ಶಾಲೆಯ ಆರನೇ ತರಗತಿ ವಿದ್ಯಾರ್ಥಿ ಅಬ್ದುಲ್ ರೆಹಮಾನ್ (12) ಎಂದು ಗುರುತಿಸಲಾಗಿದೆ. ಮಧ್ಯಾಹ್ನ ಶಾಲೆಯಿಂದ ಪುಸ್ತಕಗಳನ್ನು ಪಡೆದು ತಾಯಿಯೊಂದಿಗೆ ಮನೆಗೆ ಮರಳುತ್ತಿದ್ದ ರೆಹಮಾನ್, ನೇಜಾರು ಆಯಿಷಾ ಮಸೀದಿ ಬಳಿ ಇಳಿದು ರಸ್ತೆ ದಾಟುತ್ತಿದ್ದನು. ಈ ವೇಳೆ ಸಂತೆಕಟ್ಟೆಯಿಂದ ಕೆಮ್ಮಣ್ಣು ಕಡೆಗೆ ಅತಿವೇಗವಾಗಿ ಬಂದ ಕಾರು ಬಾಲಕನಿಗೆ ಢಿಕ್ಕಿ ಹೊಡೆದಿದೆ.

ಕೂಡಲೇ ಆತನನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟರಲ್ಲೇ ಆತ ಕೊನೆಯುಸಿರೆಳೆದಿದ್ದನು. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment