ಉಡುಪಿ: ರಿಯಲ್ ಎಸ್ಟೇಟ್ ಉದ್ಯಮಿಯಿಂದ 70 ಲಕ್ಷ ದೋಚಿ, ಸುಳ್ಳು ಅತ್ಯಾಚಾರ ಕೇಸ್ ಜಡಿಯುವುದಾಗಿ ಬೆದರಿಸಿದ್ದ ಮಹಿಳೆ ಅರೆಸ್ಟ್..!

Prakhara News
2 Min Read

ಉಡುಪಿ : ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವ ನೆಪದಲ್ಲಿ ಉದ್ಯಮಿಯೊಬ್ಬರಿಗೆ ಬರೋಬ್ಬರಿ 70 ಲಕ್ಷ ರೂಪಾಯಿ ವಂಚಿಸಿ, ಬಳಿಕ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಹೆದರಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಝೀನತ್ ಇಬ್ರಾಹಿಂ ಎಂಬ ಮಹಿಳೆಯನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿತೆಯನ್ನು ಕಾಪು ತಾಲೂಕಿನ ಪಡುಬಿದ್ರೆಯ ನಡ್ಸಾಲು ಗ್ರಾಮದ ಕಂಚಿನಡ್ಕ ನಿವಾಸಿ ಝೀನತ್ ಎಂದು ಗುರುತಿಸಲಾಗಿದೆ. ಈಕೆಯ ವಂಚನೆ ಜಾಲಕ್ಕೆ ಸಬೀನಾ ಇಲಿಯಾಸ್ ಸೇರಿದಂತೆ ಇತರರು ಸಾಥ್ ನೀಡುತ್ತಿದ್ದರು ಎಂದು ತಿಳಿದುಬಂದಿದೆ.

ಉಡುಪಿ ಮೂಲದ ರಿಯಲ್ ಎಸ್ಟೇಟ್ ಉದ್ಯಮಿಗೆ ಝೀನತ್ ಇಬ್ರಾಹೀಂ ಪರಿಚಯವಾಗಿದ್ದಳು. ಬಳಿಕ ಇಬ್ಬರು ಸೇರಿ ಜಂಟಿಯಾಗಿ ರಿಯಲ್ ಎಸ್ಟೇಟ್ ಆಫೀಸ್ ಪ್ರಾರಂಭಿಸಿದ್ದರು. ಈ ವೇಳೆ ಜಮೀನು ಖರೀದಿಯಲ್ಲಿ ಹೂಡಿಕೆ ಮಾಡುವ ಉದ್ದೇಶದಿಂದ ಉದ್ಯಮಿಯು ಝೀನತ್‌ಳನ್ನು ನಂಬಿ ₹70 ಲಕ್ಷ ಹಣ ನೀಡಿದ್ದರು. ಆದರೆ, ಆಕೆ ಈ ಹಣವನ್ನು ಬಿಸಿನೆಸ್‌ಗೆ ಬಳಸದೆ ತನ್ನ ಸ್ವಂತ ಐಷಾರಾಮಿ ಉದ್ದೇಶಗಳಿಗಾಗಿ ಬಳಸಿ ಉದ್ಯಮಿಗೆ ನಂಬಿಕೆ ದ್ರೋಹ ಎಸಗಿದ್ದಳು.

ಉದ್ಯಮಿಯು ನಷ್ಟದ ಕಾರಣ ಹಳೇ ಕಚೇರಿಯನ್ನು ಮುಚ್ಚುವ ಸಂದರ್ಭದಲ್ಲಿ ಅಲ್ಲಿದ್ದ ಕೆಲವು ರಹಸ್ಯ ಕಡತಗಳು ಮತ್ತು ಪೆನ್ ಡ್ರೈವ್ ಪತ್ತೆಯಾಗಿತ್ತು. ಅದನ್ನು ಪರಿಶೀಲಿಸಿದಾಗ ರಾಜ್ಯದ ಹಲವಾರು ಪ್ರಭಾವಿ ಗಣ್ಯ ವ್ಯಕ್ತಿಗಳ ಖಾಸಗಿ ಮತ್ತು ಅಶ್ಲೀಲ ಛಾಯಾಚಿತ್ರಗಳು ಹಾಗೂ ವಿಡಿಯೋಗಳು ಇರುವುದು ಕಂಡುಬಂದು ಉದ್ಯಮಿ ಬೆಚ್ಚಿಬಿದ್ದಿದ್ದರು. ತಾನು ಕೊಟ್ಟಿದ್ದ ₹70 ಲಕ್ಷ ಹಣವನ್ನು ವಾಪಸ್ ಕೇಳಿದಾಗ ಝೀನತ್ ತನ್ನ ಅಸಲಿ ಮುಖವಾಡ ಕಳಚಿದ್ದಳು.

ಉದ್ಯಮಿಯ ಹೊಸ ಕಚೇರಿಗೆ ನುಗ್ಗಿ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದಲ್ಲದೆ, ಹಣ ನೀಡದಿದ್ದರೆ ಸುಳ್ಳು ಅತ್ಯಾಚಾರ ಪ್ರಕರಣ (Fake Rape Case) ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾಳೆ. ಅಷ್ಟೇ ಅಲ್ಲದೆ, ಉದ್ಯಮಿಯ ಅಶ್ಲೀಲ ವಿಡಿಯೋಗಳು ತನ್ನ ಬಳಿ ಇವೆ ಎಂದು ಬ್ಲ್ಯಾಕ್‌ಮೇಲ್ ಮಾಡಿದ್ದಾಳೆ. ಇಷ್ಟಕ್ಕೆ ನಿಲ್ಲದ ಈಕೆ ಉದ್ಯಮಿಯ ಪತ್ನಿ ಮತ್ತು ಮಕ್ಕಳನ್ನು ಕಿಡ್ನ್ಯಾಪ್ ಮಾಡಿ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಳು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ವ್ಯವಸ್ಥಿತ ಬ್ಲ್ಯಾಕ್‌ಮೇಲ್ ಜಾಲದ ವಿರುದ್ಧ ಉದ್ಯಮಿ ನೀಡಿದ ದೂರಿನನ್ವಯ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ (BNS) ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ಈ ಹನಿಟ್ರ್ಯಾಪ್ ಮತ್ತು ವಸೂಲಿ ದಂಧೆಯಲ್ಲಿ ಝೀನತ್ ಜೊತೆಗೆ ಸಬೀನಾ ಇಲ್ಯಾಸ್ ಹಾಗೂ ಇನ್ನಿತರರು ಕೈಜೋಡಿಸಿ ದೊಡ್ಡ ಜಾಲ ನಡೆಸುತ್ತಿರುವುದು ತನಿಖೆಯಿಂದ ತಿಳಿದುಬಂದಿದೆ. ಪ್ರಕರಣದ ಗಂಭೀರತೆ ಅರಿತ ಉಡುಪಿ ನಗರ ಠಾಣೆಯ ಎಸ್‌ಐ ಭರತೇಶ್ ಕಂಕಣವಾಡಿ ನೇತೃತ್ವದ ವಿಶೇಷ ಪೊಲೀಸ್ ತಂಡ ಜುಲೈ 2ರಂದು ಪಡುಬಿದ್ರೆಯ ಕಂಚಿನಡ್ಕದಲ್ಲಿ ಝೀನತ್‌ಳನ್ನು ದಸ್ತಗಿರಿ ಮಾಡಿದೆ. ನ್ಯಾಯಾಲಯವು ಆರೋಪಿಯನ್ನು ಮುಂದಿನ ವಿಚಾರಣೆಗಾಗಿ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

“ಇದೇ ರೀತಿ ಆರೋಪಿ ಝೀನತ್ ಇಬ್ರಾಹೀಂ ಎಂಬಾಕೆಯಿಂದ ಸಾರ್ವಜನಿಕರು ಅಥವಾ ಗಣ್ಯರು ಯಾರಾದರೂ ವಂಚನೆಗೊಳಗಾಗಿದ್ದರೆ, ಯಾವುದೇ ಭಯವಿಲ್ಲದೆ ತಕ್ಷಣ ಉಡುಪಿ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ದೂರು ನೀಡಬಹುದು” ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ (SP) ಹರಿರಾಂ ಶಂಕರ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Share This Article
Leave a Comment