ಸುದೀಪ್ ರೈ ನೆನಪಿನಲ್ಲಿ ಬುದ್ಧ ಪೂರ್ಣಿಮೆಯಂದು “ಕಲ್ಪವೃಕ್ಷ” – “ಶ್ರೀ ಗಂಧ” ಸಸಿಗಳನ್ನು ನೆಟ್ಟು ನಡೆದ ವಿಶೇಷ ಸ್ಮರಣಾರ್ಥ ಕಾರ್ಯಕ್ರಮ

Prakhara News
1 Min Read

ನೆಲ್ಯಾಡಿ: ಕಳೆದ ತಿಂಗಳು ಮಾರ್ಚ್ 29 ರಂದು ಅಗಲಿದ ತಮ್ಮ ಮಗ ಸುದೀಪ್ ರೈ ನೆನಪಿಗಾಗಿ ಅವರ ನೆನಪನ್ನು ಶಾಶ್ವತವಾಗಿ ಇರಿಸಲು ಮೇ 1 ಶುಕ್ರವಾರ ವೈಶಾಖ ಹುಣ್ಣಿಮೆ, ಬುದ್ಧ ಪೂರ್ಣಿಮೆ ಹಾಗೂ ಕಾರ್ಮಿಕ ದಿನಾಚರಣೆಯ ಶುಭ ದಿನದಂದು ಮಧ್ಯಾಹ್ನ 12:05 ಗಂಟೆಗೆ ಒಂದು ವಿಶೇಷ ಸ್ಮರಣಾರ್ಥ ಕಾರ್ಯಕ್ರಮವು ದಿ|| ಸುದೀಪ್ ರೈ ಮನೆಯಲ್ಲಿ ಜರುಗಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಉಚ್ಚ ನ್ಯಾಯಾಲಯದ ವಕೀಲರಾದ ಚಿದಾನಂದ ಮಾಣಿ ಯವರು ವಹಿಸಿಕೊಂಡಿದ್ದರು.ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಲವು ಅತಿಥಿಗಳು ಹಾಗೂ ನೆರೆದಿದ್ದ ಸಾರ್ವಜನಿಕರ ಸಮ್ಮುಖದಲ್ಲಿ “ಬಿ.ಸುದೀಪ” ನ ನೆನಪನ್ನು ಸದಾ ಹಸಿರಾಗಿರಿಸಲು “ಕಲ್ಪವೃಕ್ಷ” – “ಶ್ರೀ ಗಂಧ” ಹಾಗೂ ಇನ್ನಿತರ ಸಸಿಗಳನ್ನು ನೆಟ್ಟು ವಿಶೇಷ ಸ್ಮರಣಾರ್ಥ ಕಾರ್ಯಕ್ರಮವು ಜರುಗಿತು.

ತದನಂತರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಉಚ್ಚ ನ್ಯಾಯಾಲಯದ ವಕೀಲರಾದ ಚಿದಾನಂದ ಮಾಣಿ ಯವರು ಮೃತ ಸುದೀಪನನ್ನು ಸ್ಮರಿಸಿ ಅವರ ಒಡನಾಟದ ಬಗ್ಗೆ ತಿಳಿಸಿದರು. ಸದಾ ಹಸನ್ಮುಖಿ , ಸ್ನೇಹಜೀವಿ ಹಾಗೂ ನಿಷ್ಕಲ್ಮಶ ಹೃದಯವನ್ನು ಹೊಂದಿದ್ದ ಸುದೀಪನ ಅಕಾಲಿಕ ಮರಣವು ತುಂಬಾ ದುಃಖಕರವಾಗಿದ್ದು ಆತನ ಆತ್ಮಹತ್ಯೆಗೆ ಕಾರಣಳಾದ ಸೌಮ್ಯ ಶೆಟ್ಟಿಗೆ ಕಠಿಣ ಶಿಕ್ಷೆ ಆಗಲೇಬೇಕು ಎಂದು ಆಗ್ರಹಿಸಿದರು.

ಹಾಗೆಯೇ ಪುತ್ರನನ್ನು ಕಳೆದುಕೊಂಡ ಶೋಕದಲ್ಲಿರುವ ಪೋಷಕರು ಅವನ ನೆನಪಿಗಾಗಿ ಈ ರೀತಿಯ ಒಂದು ಅರ್ಥಪೂರ್ಣ ವಿಶೇಷ ಸ್ಮರಣಾರ್ಥ ಕಾರ್ಯಕ್ರಮವನ್ನು ಆಯೋಜನೆ ಮಾಡಿರುವುದನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉದ್ಯಮಿ ಜಗದೀಶ್ ಶೆಟ್ಟಿ ಕಾರ್ಕಳ, ಭಾರತೀಯ ಸೇನೆಯ ಮಾಜಿ ಯೋಧರಾದ ಮೋಹನ್ ಶೆಟ್ಟಿ, ನಿವೃತ್ತ BSNL ಉದ್ಯೋಗಿ ಶ್ರೀ ಕಾಂತಪ್ಪ ಗೌಡ , ನೆಲ್ಯಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸಲಾಮ್ ಬಿಲಾಲ್ ಹಾಗೂ ಕೃಷಿಕರಾದ ಗಾಣದಕೋಡಿ ಮೋಹನದಾಸ್ ಶೆಟ್ಟಿ ,ಕರ್ನೋಡಿ ಲಕ್ಷ್ಮಣ ಶೆಟ್ಟಿ, ಪೇದುರು ಡಿಸೋಜಾ, ಬಿ. ಪ್ರವೀಣ ಗೋಳಿತೊಟ್ಟು, ಸಂದೇಶ್ ಬಾಕಿಜಾಲು ಭಾಗವಹಿಸಿದ್ದರು. ಗಂಗಾಧರ ಶೆಟ್ಟಿ ಹೊಸಮನೆಯವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.

Share This Article
Leave a Comment