ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 54ನೇ ಜಪ್ಪಿನಮೊಗರು ವಾರ್ಡಿನಲ್ಲಿ ಒಂದು ಕೋಟಿ ರೂ. ವಿಶೇಷ ಅನುದಾನದಲ್ಲಿ ಕಟ್ಟೆಪುಣೆ ರಸ್ತೆ ಹಾಗೂ ಸೇತುವೆ ಅಭಿವೃದ್ಧಿ ಕಾಮಗಾರಿ ನಡೆಯಲಿದ್ದು ಶಾಸಕ ವೇದವ್ಯಾಸ ಕಾಮತ್ರವರ ನೇತೃತ್ವದಲ್ಲಿ ಗುದ್ದಲಿ ಪೂಜೆಯು ನಡೆಯಿತು.


ನಂತರ ಮಾತನಾಡಿದ ಶಾಸಕರು, ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ಈ ಕಟ್ಟೆಪುಣಿ ರಸ್ತೆಯ ಭಾಗದ ಜನರು ಪ್ರತೀ ವರ್ಷವೂ ಮಳೆಗಾಲದಲ್ಲಿ ನೆರೆಯಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದರು. ಇದಕ್ಕೊಂದು ಪರಿಹಾರ ಸಿಗಬೇಕು, ಈ ಭಾಗಕ್ಕೆ ಸುಸಜ್ಜಿತ ಕಾಂಕ್ರೀಟ್ ರಸ್ತೆ ಹಾಗೂ ಸೇತುವೆ ನಿರ್ಮಾಣವಾಗಬೇಕು ಎಂಬುದು ಸ್ಥಳೀಯರ ಮತ್ತು ಬಿಜೆಪಿ ಪ್ರಮುಖರ ಬಹು ವರ್ಷದ ಬೇಡಿಕೆಯಾಗಿತ್ತು. ಈ ಹಿಂದೆ ತಡೆಗೋಡೆ ಕಟ್ಟಿದ್ದರೂ ನೀರಿನ ರಭಸಕ್ಕೆ ಅದು ಸಾಕಾಗುತ್ತಿರಲಿಲ್ಲ. ಹಾಗಾಗಿ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ದೊಡ್ಡ ಮೊತ್ತದ ಅನುದಾನದ ಅಗತ್ಯವಿತ್ತು. ಇಂತಹ ಸಂದರ್ಭದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಕಾಂಗ್ರೆಸ್ ಸರ್ಕಾರವು ಹೆಚ್ಚಿನ ಅನುದಾನಗಳನ್ನು ನೀಡದೇ, ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ ಕೇವಲ ಇಪ್ಪತ್ತೈದು ಕೋಟಿ ನೀಡಿದೆ. ಹಾಗಿದ್ದರೂ ಇಲ್ಲಿನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಲೋಕೋಪಯೋಗಿ ಇಲಾಖೆಯಿಂದ ಸುಮಾರು ಒಂದು ಕೋಟಿಯ ಕಾಮಗಾರಿಯನ್ನು ಈ ಭಾಗದಲ್ಲೇ ಕೈಗೆತ್ತಿಕೊಂಡಿದ್ದೇವೆ. ನಮ್ಮ ಮೇಲೆ ವಿಶ್ವಾಸವಿಟ್ಟು ತಾಳ್ಮೆಯಿಂದ ಸಹಕರಿಸಿದ ಸ್ಥಳೀಯರಿಗೆ ಇದೇ ವೇಳೆ ನನ್ನ ಧನ್ಯವಾದಗಳನ್ನು ಸಹ ಸಮರ್ಪಿಸುತ್ತೇನೆ ಎಂದರು.
ನಿಕಟಪೂರ್ವ ಪಾಲಿಕೆ ಸದಸ್ಯರಾದ ವೀಣಾಮಂಗಳ, ಪ್ರಮುಖರಾದ ಲಲ್ಲೇಶ್, ಕೀರ್ತೇಶ್, ರಾಮ್ ಪ್ರಸಾದ್, ಸುಜಾತ, ಪ್ರಾಣೇಶ್, ಸುರೇಂದ್ರ, ಮಧು ಕುಮಾರ್, ಸುಮತಿ, ನಾಗೇಶ್, ಸೋಹನ್, ಮೋಹನ್ ದಾಸ್ ಅಡ್ಯಂತಾಯ, ಪುಷ್ಪರಾಜ್, ಮನೋಹರ್, ಮನೋಜ್ ಪೂಜಾರಿ, ರಾಜೇಶ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


