ಸುರತ್ಕಲ್ : ಬಿಪಿಎಲ್ ಆದ್ರೂ ಇರ್ಲಿ, ಎಪಿಎಲ್ ಆದ್ರೂ ಇರ್ಲಿ, ನಿಮ್ಮ ಖಾತೆಗೆ ಟಕ ಟಕ್ ಟಕಾ ಟಕ್ ಹಣ ಹಾಕ್ತೀವಿ” ಎಂದು ಚುನಾವಣೆ ಪೂರ್ವದಲ್ಲಿ ರಾಹುಲ್ ಗಾಂಧಿ, ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದರು. ಆದರೆ ಇಂದು ಲಕ್ಷಾಂತರ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯನ್ನು ಬಿಪಿಎಲ್ ನೆಪ ಒಡ್ಡಿ ಸ್ಥಗಿತಗೊಳಿಸಿ ಬಹುದೊಡ್ಡ ಸರ್ಜಿಕಲ್ ಸ್ಟ್ರೈಕ್ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ದ್ರೋಹ ಮಾಡಿದೆ ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.


“ಗೃಹಲಕ್ಷ್ಮೀ ಯೋಜನೆಯಡಿ 1.26 ಕೋಟಿ ಮಹಿಳೆಯರಿಗೆ ಪ್ರತಿ ತಿಂಗಳು ₹2,000 ನೀಡುವ ಭರವಸೆ ನೀಡಿದ್ದ ಕಾಂಗ್ರೆಸ್, ಈಗ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಎರಡು ಕಂತುಗಳ ₹5,000 ಕೋಟಿ ಹಣವನ್ನು ನೀಡದೆ ಲಕ್ಷಾಂತರ ಫಲಾನುಭವಿಗಳಿಗೆ ಅನ್ಯಾಯ ಮಾಡಿದೆ” ಎಂದು ಆರೋಪಿಸಿದ್ದಾರೆ.

“ಸರ್ಕಾರ ಈಗ ಫಲಾನುಭವಿಗಳ ದಾಖಲೆಗಳ ಮರುಪರಿಶೀಲನೆ, ತನಿಖೆ ನೆಪದಲ್ಲಿ ಯೋಜನೆಯನ್ನು ಕಡಿತಗೊಳಿಸಲು ಹೊರಟಿದೆ. 1.48 ಲಕ್ಷ ಮೃತ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಿದೆ ಎಂಬ ಕಾರಣ ನೀಡಿ, ನೈಜ ಫಲಾನುಭವಿಗಳನ್ನೇ ಯೋಜನೆಯಿಂದ ಕೈಬಿಡುವ ಹುನ್ನಾರ ನಡೆದಿದೆ” ಎಂದು ಭರತ್ ಶೆಟ್ಟಿ ದೂರಿದರು.
ನಿಕಟಪೂರ್ವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಆರಂಭದಲ್ಲಿ “ಆಗಸ್ಟ್ವರೆಗೆ ಎಲ್ಲಾ ಕಂತು ಪಾವತಿಯಾಗಿದೆ” ಎಂದು ತಪ್ಪು ಮಾಹಿತಿ ನೀಡಿ, ನಂತರ ಎರಡು ಕಂತು ಬಾಕಿ ಇದೆ ಎಂದು ಒಪ್ಪಿಕೊಂಡಿದ್ದರು.

“1.26 ಕೋಟಿ ಮಹಿಳೆಯರಿಗೆ ತಿಂಗಳಿಗೆ ₹2,000 ಅಂದರೆ ಎರಡು ತಿಂಗಳಿಗೆ ₹5,000 ಕೋಟಿ ಆಗುತ್ತದೆ. ಈ ಹಣ ಎಲ್ಲಿ ಹೋಯಿತು ಎಂದು ಸರ್ಕಾರ ಉತ್ತರಿಸಬೇಕು ಎಂದು ಒತಾಯಿಸಿದ್ದಾರೆ.


