ಕಳಸ, ಕುದುರೆಮುಖ ಮಾರ್ಗದಲ್ಲಿ‌ ಭಾರೀ ಟ್ರಾಫಿಕ್‌ ಜಾಮ್: ರಸ್ತೆ ತಿರುವಿನಲ್ಲಿ ಲಾರಿ ನಿಲ್ಲಿಸಿ, ಕೀ ಸಮೇತ ಚಾಲಕ ಪರಾರಿ..!

Prakhara News
1 Min Read

ಚಿಕ್ಕಮಗಳೂರು: ಕಳಸ ತಾಲೂಕಿನ ನೆಲ್ಲಿಬೀಡು ಗ್ರಾಮದ ಬಳಿ ಅಪಾಯಕಾರಿ ರಸ್ತೆ ತಿರುವಿನಲ್ಲಿ ಲಾರಿಯನ್ನು ನಿಲ್ಲಿಸಿ ಕೀ ಸಮೇತ ಚಾಲಕ ನಾಪತ್ತೆಯಾಗಿದ್ದಾನೆ. ಪರಿಣಾಮ ಕಿ.ಮೀ.ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿದೆ.

ಕಳಸದಿಂದ ಮಂಗಳೂರು ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯ ಅಪಾಯಕಾರಿ ತಿರುವಿನಲ್ಲಿ ಲಾರಿ ಚಾಲಕ ಲಾರಿ ನಿಲ್ಲಿಸಿ ಕೀ ಸಮೇತ ನಾಪತ್ತೆಯಾಗಿದ್ದಾನೆ. ಇದರಿಂದ ಸುರಿಯುತ್ತಿರುವ ಮಳೆ ಮಧ್ಯೆ ರಸ್ತೆಯ ಎರಡು ಕಡೆಗಳಲ್ಲಿ ಕಿ.ಮೀ.ಗಟ್ಟಲೇ ನೂರಾರು ವಾಹನಗಳು ಸರದಿ ಸಾಲಿನಲ್ಲಿ ನಿಂತಿದ್ದವು.

ಲಾರಿ ಚಾಲಕ ಲಾರಿಯ ಮಾಲೀಕನ ಬಳಿ 6 ಸಾವಿರ ರೂ. ಹಣ ಹಾಕಿಸಿಕೊಂಡು ರಸ್ತೆ ಮಧ್ಯೆಯೇ ಲಾರಿ ಬಿಟ್ಟು ಓಡಿಹೋಗಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿದ ಕುದುರೆಮುಖ ಪೊಲೀಸರು ಲಾರಿಯನ್ನು ತೆಗೆಯಲಾಗದೆ ಮಾಲೀಕನಿಗೆ ಕರೆ ಮಾಡಿ ಕೂಡಲೇ ಬೇರೆ ಚಾಲಕರನ್ನ ಕಳುಹಿಸುವಂತೆ ಸೂಚನೆ ನೀಡಿದ್ದಾರೆ. ಲಾರಿ ಚಾಲಕನಿಗಾಗಿ ಕುದುರೆಮುಖ ಪೊಲೀಸರು ಶೋಧ ನಡೆಸಿದ್ದಾರೆ. ಆದರೆ, ಲಾರಿ ಚಾಲಕ ಪತ್ತೆಯಾಗಿಲ್ಲ.

ಕಳಸ – ಕುದುರೆಮುಖ ಮಾರ್ಗದಲ್ಲಿ ಮೂರು ಅಪಾಯಕಾರಿ ಹಳೆಯ ಸೇತುವೆಗಳಿವೆ. ಭಾರಿ ಪ್ರಮಾಣದ ಭಾರ ಹೊತ್ತಿರುವ ದೊಡ್ಡ ಲಾರಿಗಳನ್ನು ಈ ಮಾರ್ಗದಲ್ಲಿ ಬಿಟ್ಟಿರುವುದಕ್ಕೆ ಸ್ಥಳೀಯರು ಕೂಡ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಮೂರರಲ್ಲಿ ಒಂದೇ ಒಂದು ಸೇತುವೆ ಕಳಚಿ ಬಿದ್ದರೂ ಕೂಡ ಕಳಸ ಹಾಗೂ ಕುದುರೆಮುಖ ಸಂಪರ್ಕ ಸಂಪೂರ್ಣ ಬಂದ್ ಆಗಲಿದೆ.

ಕುಸಿಯುವ ಹಂತ ತಲುಪಿರುವ ಸೇತುವೆಗಳಿರೋ ಈ ಮಾರ್ಗದಲ್ಲಿ ಭಾರೀ ವಾಹನಗಳನ್ನು ಬಿಡದಂತೆ ಸೂಕ್ತ ಕ್ರಮ ಕೈಗೊಳ್ಳಲು ಸ್ಥಳೀಯರು ಆಗ್ರಹಿಸಿದ್ದಾರೆ. ಕೂಡಲೇ ಲಾರಿಯನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸ್ಥಳೀಯರು ಹಾಗೂ ಪ್ರವಾಸಿಗರು ಪೊಲೀಸರಿಗೆ ಮನವಿ ಮಾಡಿದ್ದಾರೆ. ಕುದುರೆಮುಖ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment