ಮಂಗಳೂರು : ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದ ಕಾಡಬೆಟ್ಟಿನಲ್ಲಿ ಕುಟುಂಬದ ಕಾರ್ಯಕ್ರಮದ ವೇಳೆ ಕೊಲೆ ಘಟನೆ ನಡೆದಿದೆ.


38 ವರ್ಷದ ಮಧುಸೂದನ್ ಮೃತಪಟ್ಟ ವ್ಯಕ್ತಿಯಾಗಿದ್ದು, ಆರೋಪಿ 23 ವರ್ಷದ ರಾಹುಲ್ ಮೃತರ ಅಣ್ಣನ ಮಗನಾಗಿದ್ದಾನೆ.

ದೈವದ ತಂಬಿಲ ಕಾರ್ಯಕ್ರಮದ ವೇಳೆ ಮದ್ಯಪಾನ ಮಾಡಿ ಗದ್ದಲ ಮಾಡುತ್ತಿದ್ದುದನ್ನು ಮಧುಸೂದನ್ ಆಕ್ಷೇಪಿಸಿದ್ದರಿಂದ ವಾಗ್ವಾದ ನಡೆದಿದೆ. ಈ ವೇಳೆ ರಾಹುಲ್ ಬಿಯರ್ ಬಾಟಲಿಯಿಂದ ಮಧುಸೂದನ್ ಅವರ ಕುತ್ತಿಗೆಗೆ ಇರಿದಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಗಂಭೀರ ಗಾಯಗೊಂಡ ಮಧುಸೂದನ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಮೃತಪಟ್ಟಿದ್ದಾರೆ. ಘಟನೆ ಬಳಿಕ ಆರೋಪಿ ಪರಾರಿಯಾಗಿದ್ದಾನೆ. ಮೃತರು ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು.
ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.


