ಬೆಂಗಳೂರು: ಕೆಪಿಎಸ್ಸಿ ನೇಮಕಾತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ ಅವರನ್ನು ಬಂಧಿಸಲಾಗಿದೆ. ಕೆಪಿಎಸ್ಸಿಯಿಂದ ಪಶು ವೈದ್ಯಾಧಿಕಾರಿಗಳ ನೇಮಕದಲ್ಲಿ ಹಗರಣ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಒಂದೆಡೆ ಇಡಿ ಅಧಿಕಾರಿಗಳು, ಕೆಪಿಎಎಸ್ ಮಾಜಿ ಅಧ್ಯಕ್ಷ, ಸದಸ್ಯರು ಹಾಗೂ ಸಂಬಂಧಿಸಿದ ಅಧಿಕಾರಿಗಳ ಮನೆ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದೆ.ಪಶು ವೈದ್ಯಾಧಿಕಾರಿಗಳ ಪರೀಕ್ಷಾ ನಿಯಂತ್ರಕರಾಗಿದ್ದ ಜ್ಞಾನೇಂದ್ರ ಕುಮಾರ್ ಅವರನ್ನ ಸಿಐಡಿ ಅಧಿಕಾರಿಗಳು ಸುದೀರ್ಘ ವಿಚಾರಣೆ ನಡೆಸಿದ್ದು, ಎರಡು ದಿನಗಳ ಬಳಿಕ ಅವರನ್ನ ವಶಕ್ಕೆ ಪಡೆದಿದೆ.


ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷಾ ನಿಯಂತ್ರಕರಾಗಿದ್ದ ಅವಧಿಯಲ್ಲಿ ನಡೆದಿದೆ ಎನ್ನಲಾದ ಪ್ರಶ್ನೆಪತ್ರಿಕೆ ಸೋರಿಕೆ, ಅಂಕ ತಿದ್ದುಪಡಿ ಹಾಗೂ ನೇಮಕಾತಿಯಲ್ಲಿನ ಅಕ್ರಮಗಳ ಕುರಿತಂತೆ ಸಿಐಡಿ ವಿಶೇಷ ತನಿಖಾ ತಂಡ ತೀವ್ರ ತನಿಖೆ ನಡೆಸುತ್ತಿದೆ. ಪ್ರಕರಣದ ತನಿಖೆಯ ಭಾಗವಾಗಿ ಸಿಐಡಿ ಅಧಿಕಾರಿಗಳು (ಆ.28) ಸತತ 11 ಗಂಟೆಗಳ ಕಾಲ ಜ್ಞಾನೇಂದ್ರ ಕುಮಾರ್ ಅವರನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದರು. ಬಳಿಕ ನಿನ್ನೆ (ಆಗಸ್ಟ್ 29) ಮಧ್ಯಾಹ್ನ 12 ಗಂಟೆಯಿಂದ ಮತ್ತೆ ವಿಚಾರಣೆ ಮುಂದುವರಿಸಿದ ತನಿಖಾಧಿಕಾರಿಗಳು, ಅವರು ನೀಡಿದ ಹೇಳಿಕೆಗಳಲ್ಲಿನ ಅಸಮಂಜಸತೆ ಹಾಗೂ ತನಿಖಾ ಪ್ರಕ್ರಿಯೆಗೆ ಸರಿಯಾಗಿ ಸ್ಪಂದಿಸದ ಕಾರಣ ಅಂತಿಮವಾಗಿ ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ವೈದ್ಯಕೀಯ ತಪಾಸಣೆಗೆ ಒಳಪಡಿಸಿದ ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಪ್ರಕರಣದ ಮತ್ತಷ್ಟು ಆಳವಾದ ಮಾಹಿತಿ ಹಾಗೂ ಇತರ ಪ್ರಭಾವಿಗಳ ಪಾತ್ರವನ್ನು ಬಯಲಿಗೆಳೆಯಲು ಹೆಚ್ಚಿನ ದಿನಗಳ ಕಾಲ ತಮ್ಮ ಕಸ್ಟಡಿಗೆ ಪಡೆಯಲು ಸಿಐಡಿ ಸಿದ್ಧತೆ ನಡೆಸಿದೆ. ಸಿಐಡಿ ತನಿಖೆಗೂ ಮೊದಲೇ ಇಡಿ ಸಹ ಈ ಹಗರಣದಲ್ಲಿ ಪ್ರವೇಶಿಸಿದ್ದು, ಇತ್ತೀಚೆಗಷ್ಟೇ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಿವಾಸದ ಮೇಲೆ ದಾಳಿ ಮಾಡಿತ್ತು.

ಆದ್ರೆ ಅಂದು ಗ್ಯಾನೇಂದ್ರ ಕುಮಾರ್ ಮನೆಯಲ್ಲಿ ಇರಲಿಲ್ಲ. ಬದಲಿಗೆ ತಮ್ಮ ರಾಜ್ಯ ಉತ್ತರ ಪ್ರದೇಶಕ್ಕೆ ತೆರಳಿದ್ದರು. ಹೀಗಾಗಿ ಅನಿವಾರ್ಯವಾಗಿ ಇಡಿ ಅಧಿಕಾರಿಗಳು ನಕಲಿ ಕೀ ಮಾಡಿಸಿ ಮನೆ ಬಾಗಿಲು ತೆರೆದು ಪರಿಶೀಲನೆ ಮಾಡಿದ್ದರು.

