ದೆಹಲಿ: ಪೊಲೀಸ್ ಎಸ್‌ಐ ಪುತ್ರನ ಮರ್ಸಿಡಿಸ್ ಅಟ್ಟಹಾಸ – ವಾಕಿಂಗ್ ಹೋಗಿದ್ದ 70 ವರ್ಷದ ವೃದ್ಧೆ ದಾರುಣ ಸಾವು..!

Prakhara News
1 Min Read

ದೆಹಲಿ : ದೆಹಲಿಯ ನರೇಲಾದಲ್ಲಿ ಶನಿವಾರ ಬೆಳಿಗ್ಗೆ ವೇಗವಾಗಿ ಬಂದ ಮರ್ಸಿಡಿಸ್ ಕಾರೊಂದು ಮತ್ತೊಂದು ಕಾರಿಗೆ ಭೀಕರವಾಗಿ ಡಿಕ್ಕಿ ಹೊಡೆದ ಪರಿಣಾಮ, ರಸ್ತೆಯಲ್ಲಿ ವಾಕಿಂಗ್ ಹೋಗುತ್ತಿದ್ದ 70 ವರ್ಷದ ವೃದ್ಧೆಯೊಬ್ಬರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ. ಮೃತ ವೃದ್ಧೆಯನ್ನು ನರೇಲಾದ ಮಾಮುರ್ಪುರ ನಿವಾಸಿ ಊರ್ಮಿಳಾ (70) ಎಂದು ಗುರುತಿಸಲಾಗಿದೆ. ಮರ್ಸಿಡಿಸ್ ಕಾರು ಚಾಲನೆ ಮಾಡುತ್ತಿದ್ದ ವ್ಯಕ್ತಿಯನ್ನು ಹರಿಯಾಣ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಪುತ್ರ ಶುಭಂ ಎಂದು ಗುರುತಿಸಲಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಶನಿವಾರ ಬೆಳಿಗ್ಗೆ 8 ಗಂಟೆಯ ಸುಮಾರಿಗೆ ಮಾಮುರ್ಪುರದ ಹಿಮಾಲಯ ಅಪಾರ್ಟ್‌ಮೆಂಟ್ಸ್ ಬಳಿ ಈ ದುರಂತ ಸಂಭವಿಸಿದೆ. ಅತಿವೇಗವಾಗಿ ಬಂದ ಮರ್ಸಿಡಿಸ್ ಕಾರು ಎದುರಿನಿಂದ ಬರುತ್ತಿದ್ದ ವ್ಯಾಗನ್ ಆರ್ ಕಾರಿಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವ್ಯಾಗನ್ ಆರ್ ಕಾರು ಹಿಮ್ಮುಖವಾಗಿ ಎಸೆಯಲ್ಪಟ್ಟು, ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ತ್ರಿಚಕ್ರ (ಆಟೋ) ವಾಹನಕ್ಕೆ ಜೋರಾಗಿ ಡಿಕ್ಕಿಯಾಗಿದೆ. ಈ ವೇಳೆ ಮಾರ್ನಿಂಗ್ ವಾಕ್ ಮಾಡುತ್ತಿದ್ದ ಊರ್ಮಿಳಾ ಅವರು ವ್ಯಾಗನ್ ಆರ್ ಹಾಗೂ ತ್ರಿಚಕ್ರ ವಾಹನದ ನಡುವೆ ಸಿಲುಕಿ ತೀವ್ರ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ವ್ಯಾಗನ್ ಆರ್ ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಥಮ ಚಿಕಿತ್ಸೆ ನೀಡಲಾಗಿದೆ.

ಅಪಘಾತದ ಸಮಯದಲ್ಲಿ ಶುಭಂ ತೀವ್ರ ಮದ್ಯದ ಅಮಲಿನಲ್ಲಿದ್ದ ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ. ಕಾರಿನ ಕಪ್ ಹೋಲ್ಡರ್‌ನಲ್ಲಿ ಮದ್ಯದ ಬಾಟಲಿ ಇರುವುದು ಪತ್ತೆಯಾಗಿದೆ. ಅಪಘಾತದ ನಂತರವೂ ಆರೋಪಿ ಕಾರಿನಲ್ಲೇ ಕುಳಿತಿದ್ದ ದೃಶ್ಯಗಳು ಕಂಡುಬಂದಿವೆ. ಈ ಐಷಾರಾಮಿ ಕಾರು ತನ್ನ ಸ್ನೇಹಿತನಿಗೆ ಸೇರಿದ್ದು, ಪ್ರವಾಸಕ್ಕಾಗಿ ಎರವಲು ಪಡೆದಿದ್ದಾಗಿ ಶುಭಂ ವಿಚಾರಣೆ ವೇಳೆ ತಿಳಿಸಿದ್ದಾನೆ. ನರೇಲಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.





Share This Article
Leave a Comment