ಶಿರ್ವ : ಪೆಟ್ರೋಲ್ ಬಂಕ್ ಒಂದರಲ್ಲಿ ಫೋರ್ಡ್ ಇಕೋಸ್ಪೋರ್ಟ್ ಕಾರಿಗೆ ಫುಲ್ ಟ್ಯಾಂಕ್ ಡೀಸೆಲ್ ಹಾಕಿಸಿಕೊಂಡು, ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವಂತೆ ನಟಿಸಿ ಹಣ ಪಾವತಿಸದೆ ವಂಚಿಸಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಶಿರ್ವ ಪೊಲೀಸರು ಬೆಂಗಳೂರಿನಲ್ಲಿ ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಶಿರ್ವ ಕೋಟೆಕಾರ್ ನಿವಾಸಿ ಮಹಮ್ಮದ್ ರಿಯಾಜ್ (26), ಶಿರ್ವ ಭೂತಬೆಟ್ಟು ನಿವಾಸಿ ಮಹಮ್ಮದ್ ಅಫ್ರಾಜ್ (23) ಮತ್ತು ಉಡುಪಿ ಅಂಬಾಗಿಲಿನ ಆಶಿಲ್ (21) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಬಿಳಿ ಬಣ್ಣದ ಫೋರ್ಡ್ ಇಕೋಸ್ಪೋರ್ಟ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ.


ಜೂನ್ 27ರಂದು ರಾತ್ರಿ 9:10ರ ಸುಮಾರಿಗೆ ಕಾರ್ಕಳ ತಾಲೂಕು ಕುರ್ಕಾಲು ಗ್ರಾಮದ ಸುಭಾಸ್ ನಗರದಲ್ಲಿರುವ ಪೆಟ್ರೋಲ್ ಬಂಕ್ಗೆ ಆರೋಪಿಗಳು ಕಾರಿನಲ್ಲಿ ಬಂದಿದ್ದರು. ಬಂಕ್ನಲ್ಲಿದ್ದ ಸಿಬ್ಬಂದಿ ಶಶಾಂಕ್ ಅವರಲ್ಲಿ ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿಯು ಫುಲ್ ಟ್ಯಾಂಕ್ ಡೀಸೆಲ್ ತುಂಬಿಸುವಂತೆ ತಿಳಿಸಿದ್ದಾನೆ. ಶಶಾಂಕ್ ಅವರು ₹4,711 ಮೌಲ್ಯದ ಡೀಸೆಲ್ ತುಂಬಿಸಿ ಹಣ ಪಾವತಿಸಲು ಕ್ಯೂಆರ್ ಕೋಡ್ ನೀಡಿದ್ದಾರೆ. ಈ ವೇಳೆ ಆರೋಪಿಗಳು ಕೋಡ್ ಸ್ಕ್ಯಾನ್ ಮಾಡಿ, “ಮೊದಲು ಬಿಲ್ ಕೊಡಿ, ಬಿಲ್ ನೋಡಿಕೊಂಡು ಹಣ ಹಾಕುತ್ತೇವೆ” ಎಂದು ನಂಬಿಸಿದ್ದಾರೆ. ಸಿಬ್ಬಂದಿ ಶಶಾಂಕ್ ಮಷಿನ್ನಿಂದ ಬಿಲ್ ತೆಗೆಯುವಷ್ಟರಲ್ಲಿ, ಆರೋಪಿಗಳು ಹಣ ಪಾವತಿಸದೆಯೇ ಕಾರನ್ನು ತೀವ್ರ ವೇಗವಾಗಿ ಚಲಾಯಿಸಿಕೊಂಡು ಅಲ್ಲಿಂದ ನಾಪತ್ತೆಯಾಗಿದ್ದರು.

ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ (BNS 2023) ಕಲಂ 316(2) ಹಾಗೂ 318(4) ರಡಿಯಲ್ಲಿ ವಂಚನೆ ಪ್ರಕರಣ (ಅಪರಾಧ ಕ್ರಮಾಂಕ: 56/2026) ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕಾರ್ಕಳ ಡಿವೈಎಸ್ಪಿ ವಿಜಯ ಪ್ರಸಾದ್ ಹಾಗೂ ಕಾಪು ವೃತ್ತ ನಿರೀಕ್ಷಕ ಅಝಮತ್ ಆಲಿ ಮಾರ್ಗದರ್ಶನದಲ್ಲಿ ಶಿರ್ವ ಪಿಎಸ್ಐಗಳಾದ ಮಂಜುನಾಥ ಮರಬದ, ಲೋಹಿತ್ ಕುಮಾರ್ ಸಿ.ಎಸ್. ಮತ್ತು ಸಿಬ್ಬಂದಿಗಳಾದ ಹರ್ಷ ಭಟ್, ಬಸವರಾಜ ಹಾಗೂ ದರಿಯಪ್ಪ ಅವರ ವಿಶೇಷ ತಂಡ ತನಿಖೆ ಕೈಗೊಂಡಿತ್ತು. ತಾಂತ್ರಿಕ ಸುಳಿವು ಬೆನ್ನತ್ತಿದ ಪೊಲೀಸರು ಆರೋಪಿಗಳು ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿರುವುದನ್ನು ಪತ್ತೆ ಹಚ್ಚಿ, ಅಲ್ಲಿಗೆ ಧಾವಿಸಿ ಕಾರು ಸಮೇತ ಮೂವರನ್ನು ದಸ್ತಗಿರಿ ಮಾಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತಿದ್ದು, ಇವರು ಇದೇ ರೀತಿ ಬೇರೆಲ್ಲೂ ಬಂಕ್ಗಳಿಗೆ ವಂಚಿಸಿದ್ದಾರೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.





