ಚಿಕ್ಕಮಗಳೂರು : ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಹಿನ್ನೆಲೆಯಲ್ಲಿ ರಾಜಕೀಯ ಬೆಳವಣಿಗೆಗೆ ತಿರುವು ಸಿಕ್ಕಿದ್ದು, ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರನ್ನು ವಿಜಯಿಯಾಗಿ ಚುನಾವಣಾಧಿಕಾರಿ ಗೌರವ ಕುಮಾರ್ ಶೆಟ್ಟಿ ಘೋಷಿಸಿದ್ದಾರೆ.


ಹೈಕೋರ್ಟ್ ಸೂಚನೆಯ ಮೇರೆಗೆ ನಡೆದ ಮರು ಎಣಿಕೆಯಲ್ಲಿ ಜೀವರಾಜ್ ಅವರಿಗೆ ಮುನ್ನಡೆ ದೊರೆತ ಹಿನ್ನೆಲೆಯಲ್ಲಿ, ಇ-ಮೇಲ್ ಮೂಲಕ ಅಧಿಕೃತ ಪ್ರಮಾಣ ಪತ್ರವನ್ನು ರವಾನೆ ಮಾಡಲಾಗಿದೆ. ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅವರು ಪ್ರಮಾಣ ಪತ್ರವನ್ನು ಸ್ವೀಕರಿಸಲಿದ್ದಾರೆ.

ಮರು ಎಣಿಕೆ ವೇಳೆ ಗೊಂದಲ ಮತ್ತು ಆಕ್ಷೇಪಣೆಗಳು ವ್ಯಕ್ತವಾದ ಕಾರಣ ಫಲಿತಾಂಶ ಪ್ರಕಟಣೆ ತಡವಾಗಿತ್ತು. ಬಳಿಕ ಜೀವರಾಜ್ ಪರ ವಕೀಲರು ನೋಟಿಸ್ ನೀಡಿದ ಹಿನ್ನೆಲೆ, ಚುನಾವಣಾಧಿಕಾರಿಗಳು ಅಂತಿಮವಾಗಿ ಫಲಿತಾಂಶ ಪ್ರಕಟಿಸಿದರು.

ಈ ಮೂಲಕ ಕಳೆದ ಮೂರು ವರ್ಷಗಳಿಂದ ಶಾಸಕರಾಗಿದ್ದ ಟಿ.ಡಿ. ರಾಜೇಗೌಡ ಇದೀಗ ಮಾಜಿ ಶಾಸಕರಾಗಿದ್ದಾರೆ. ಜಿಲ್ಲೆಯಲ್ಲಿನ ಎಲ್ಲಾ ಕ್ಷೇತ್ರಗಳನ್ನು ಗೆದ್ದಿದ್ದೇವೆ ಎಂಬ ಕಾಂಗ್ರೆಸ್ ಹೇಳಿಕೆಗೆ ಈ ಬೆಳವಣಿಗೆ ಪೆಟ್ಟಿನಂತಾಗಿದೆ.
ಇನ್ನೊಂದೆಡೆ, ಚುನಾವಣಾಧಿಕಾರಿ ಗೌರವ ಕುಮಾರ್ ಶೆಟ್ಟಿ ಅವರ ನಿವಾಸದಲ್ಲೇ ಜೀವರಾಜ್ ಅವರಿಗೆ ಪ್ರಮಾಣ ಪತ್ರ ಹಸ್ತಾಂತರ ನಡೆದಿದ್ದು, ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.


