ಪರ್ಮಿಟ್ ಪಡೆದುಕೊಂಡು ಮಂಗಳೂರಿನ ಹಲವು ಭಾಗಗಳಲ್ಲಿ ಸಂಚರಿಸದೆ ಸಾರ್ವಜನಿಕರಿಗೆ ತೊಂದರೆಗೆ ಕಾರಣವಾಗಿರುವ ಸಿಟಿ ಬಸ್ ಗಳಿಗೆ ಖಡಿವಾಣ ಹಾಕಲು ಶಾಸಕ ವೇದವ್ಯಾಸ್ ಕಾಮತ್ ಆಗ್ರಹ

Prakhara News
1 Min Read

ಮಂಗಳೂರು : ಮಂಗಳೂರುನಗರ ವ್ಯಾಪ್ತಿಯಲ್ಲಿ ಅನೇಕ ಸಿಟಿ ಬಸ್ ಗಳು ನಿಗದಿತ ಸ್ಥಳಕ್ಕೆ ಹೋಗದಿರುವುದರಿಂದ ಸಾರ್ವಜನಿಕರು ತೀವ್ರ ಸಮಸ್ಯೆ ಅನುಭವಿಸುತ್ತಿದ್ದು ಇದಕ್ಕೆ ಕೂಡಲೇ ಕಡಿವಾಣ ಹಾಕಬೇಕೆಂದು ಅಧಿವೇಶನದಲ್ಲಿ ಶಾಸಕ ವೇದವ್ಯಾಸ ಕಾಮತ್ ರವರು ಆಗ್ರಹಿಸಿದರು.

ನಗರದ ಕೆಲವು ಸಿಟಿ ಬಸ್ ಗಳು ಆರ್ಥಿಕ ಕಾರಣ ನೀಡಿ ಒಂದಷ್ಟು ಪ್ರದೇಶಗಳಿಗೆ ಸೇವೆಯನ್ನು ಸೀಮಿತಗೊಳಿಸುವುದು, ಟ್ರಿಪ್ ಕಡಿತಗೊಳಿಸುವುದು ಮೊದಲಾದ ಕಾರಣಗಳಿಗೆ ಅಲ್ಲಿ ಸರ್ಕಾರಿ ಬಸ್ ಗಳನ್ನು ಹಾಕಲಾಗಿತ್ತು. ಆದರೆ ನಂತರ ಅವುಗಳನ್ನೂ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಶಕ್ತಿನಗರ, ಬಜಾಲ್-ಪಡ್ಪು-ಕೊಟ್ಟಾರ, ಪಡೀಲ್-ಕಣ್ಣಗುಡ್ಡೆ, ಬೋಳೂರು ಮಾತಾ ಅಮೃತಾನಂದಮಯಿ ನಿಂದ ರೈಲ್ವೆ ಸ್ಟೇಷನ್, ಜಲ್ಲಿಗುಡ್ಡೆ, ಸರಿಪಲ್ಲ ಮೊದಲಾದ ಭಾಗದ ಜನರು ಸೂಕ್ತ ಸಾರಿಗೆ ವ್ಯವಸ್ಥೆಯಿಲ್ಲದೇ ಪರಿತಪಿಸುವಂತಾಗಿದೆ ಎಂದರು.

ಈ ಬಗ್ಗೆ ದ.ಕ ಬಸ್ ಮಾಲಕರ ಸಂಘ, ಆರ್.ಟಿ.ಒ, ಪೊಲೀಸ್ ಇಲಾಖೆ, ಜಿಲ್ಲಾಧಿಕಾರಿ, ಕೊನೆಗೆ ಉಸ್ತುವಾರಿ ಸಚಿವರಿದ್ದ ಕೆಡಿಪಿ ಸಭೆ ಹೀಗೆ ಎಲ್ಲರ ಗಮನಕ್ಕೂ ತಂದಾಗ ಒಂದೆರಡು ದಿನ ಸಮಸ್ಯೆ ಬಗೆಹರಿದಂತೆ ಕಂಡರೂ ಅಂತಿಮ ಫಲಿತಾಂಶ ಮಾತ್ರ ಶೂನ್ಯ. ಹೀಗಾಗಿ ಅಧಿವೇಶನದಲ್ಲಿಯೇ ಪ್ರಸ್ತಾಪಿಸುತ್ತಿದ್ದು ದಯವಿಟ್ಟು ಸಾರ್ವಜನಿಕರ ಸಮಸ್ಯೆಗೆ ಮುಕ್ತಿ ನೀಡಿ ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

Share This Article
Leave a Comment