ಉಡುಪಿ: ವಾಣಿಜ್ಯ ಬಳಕೆಯ ಸಿಲಿಂಡರ್ ಅಭಾವದಿಂದಾಗಿ ಜಿಲ್ಲೆಯಲ್ಲಿ 150ಕ್ಕೂ ಹೆಚ್ಚು ಹೊಟೇಲ್ ಗಳು ಬಂದ್ ಆಗಿವೆ.ಪ್ರತಿನಿತ್ಯ ಕೃಷ್ಣನಗರಿ ಉಡುಪಿಗೆ ಬೇರೆ ಬೇರೆ ಕಡೆಗಳಿಂದ ಸುಮಾರು 600 ರಷ್ಟು ಬಸ್ ಗಳು ಬರುತ್ತವೆ.ಹಾಗೆ ಬರುವ ಸಾವಿರಾರು ಪ್ರವಾಸಿಗರಿಗೆ ಊಟ ತಿಂಡಿ ಸಿದ್ದಪಡಿಸಬೇಕಿದೆ.ಆದರೆ ಗ್ಯಾಸ್ ಅಭಾವದಿಂದಾಗಿ ಅದು ಸಾಧ್ಯವಾಗುತ್ತಿಲ್ಲ.


ಕೆಲವು ದಿನಗಳಿಂದ ಹೊಟೇಲ್ಗಳಲ್ಲಿ ಕುಚ್ಚಲಕ್ಕಿ ಅನ್ನ ದೋಸೆ ಸಹಿತ ಇತರ ತಿನಸುಗಳನ್ನು ಕೈಬಿಟ್ಟು ಹೊಟೇಲ್ ನಿರ್ವಹಣೆ ಮಾಡಲಾಗುತ್ತಿತ್ತು. ಆದರೆ ಈಗ 150ಕ್ಕೂ ಹೆಚ್ಚು ಹೊಟೇಲ್ ಗಳಿಗೆ ಬೀಗ ಹಾಕಲಾಗಿದೆ. ಗ್ಯಾಸ್ ಪೂರೈಕೆ ಅಭಾವದಿಂದ ಅನಿವಾರ್ಯವಾಗಿ ಹೊಟೇಲ್ ಬಂದ್ ಮಾಡಲಾಗಿದೆ.ಬೇಡಿಕೆಗೆ ತಕ್ಕಂತೆ ಸಿಲಿಂಡರ್ ಪೂರೈಕೆಯಾದರಷ್ಟೇ ಹೊಟೇಲ್ ತೆರೆಯಬಹುದು. ಇಲ್ಲದಿದ್ದರೆ ಇನ್ನಷ್ಟು ದಿನ ಬಂದ್ ಅನಿವಾರ್ಯ.

ಕೆಲವು ಹೊಟೇಲ್ಗಳಲ್ಲಿ ಕಟ್ಟಿಗೆ ಬಳಸಿಕೊಂಡು ಅಡುಗೆ ಮಾಡಲಾಗುತ್ತದೆಯಾದರೂ ಈಗ ಕಾರ್ಮಿಕರ ಕೊರತೆಯಿಂದಾಗಿ ಅದಕ್ಕೂ ಸಮಸ್ಯೆ ಎದುರಾಗಿದೆ. ಸೌದೆ ಬೇಕು ಎನ್ನುವಷ್ಟು ಲಭ್ಯತೆಯೂ ಇಲ್ಲ. ನಗರ ಪ್ರದೇಶದಲ್ಲಿ ಸೌದೆ ಮಾರಾಟ ಮಾಡುವವರ ಸಂಖ್ಯೆ ತೀರ ಕಡಿಮೆಯಿದೆ. ಸೌದೆ ದುಬಾರಿ ಜತೆಗೆ ಕೊರತೆಯೂ ಇದೆ.ಒಟ್ಟಾರೆ ವಾಣಿಜ್ಯ ಗ್ಯಾಸ್ ಅಲಭ್ಯತೆ ದಿನದಿಂದ ದಿನಕ್ಕೆ ಹೊಟೇಲ್ ಉದ್ಯಮದ ಮೇಲೆ ತೀವ್ರ ಪರಿಣಾಮವನ್ನು ಬೀರುತ್ತಿದೆ.



