ಮಂಗಳೂರು : ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಮತ್ತು ಅವರ ಪತ್ನಿಯ ಬಗ್ಗೆ ಅಧಿವೇಶನದಲ್ಲಿ ಅರಸೀಕೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ಎಂ. ಶಿವಲಿಂಗೇಗೌಡ ಆಡಿದ್ದಾರೆ ಎನ್ನಲಾದ ಮಾತನ್ನು ಉಲ್ಲೇಖಿಸಿ ವ್ಯಕ್ತಿಯೊಬ್ಬ ಫೇಸ್ಟುಕ್ ನಲ್ಲಿ ಪೋಸ್ಟ್ ಮಾಡಿದ್ದು ಶಾಸಕರ ಪತ್ನಿಯನ್ನು ಅವಮಾನಿಸಿದ ಬಗ್ಗೆ ನಗರದ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಪ್ರಕರಣ ಸಂಬಂಧಿಸಿ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಬಂಟ್ವಾಳ ತಾಲೂಕಿನ ಶರಣ್ ರೈ(29) ಎಂಬಾತನನ್ನು ಬಂದರು ಪೊಲೀಸರು ಬಂಧಿಸಿದ್ದಾರೆ. ಶರಣ್ ರೈ ಅಮ್ಮಾಡಿ ನಿವಾಸಿಯಾಗಿದ್ದು ರಿಯಲ್ ಎಸ್ಟೇಟ್ ಕೆಲಸ ಮಾಡಿಕೊಂಡಿದ್ದಾನೆ. ಆರೋಪಿ ಫೇಸ್ಟುಕ್ ನಲ್ಲಿ ಶಾಸಕ ವೇದವ್ಯಾಸ ಕಾಮತ್ ಪತ್ನಿಯನ್ನು ಅವಮಾನಿಸುವ ರೀತಿ ಪೋಸ್ಟ್ ಮಾಡಿದ್ದು ಈ ಬಗ್ಗೆ ಮಹಿಳೆಯೊಬ್ಬರು ಪೊಲೀಸ್ ದೂರು ನೀಡಿದ್ದರು.

ಇಂತಹ ಹೇಳಿಕೆಯಿಂದ ಗೃಹಿಣಿಯಾಗಿರುವ ಶಾಸಕರ ಪತ್ನಿಯ ಬಗ್ಗೆ ಸಮಾಜದಲ್ಲಿ ಅಗೌರವ ಉಂಟಾಗಿದೆ, ಮಹಿಳೆಯರ ಬಗ್ಗೆ ಕೀಳು ಅಭಿರುಚಿಯಿಂದ ಪೋಸ್ಟ್ ಮಾಡಿದ್ದಾಗಿದೆ ಎಂಬ ದೂರಿನಂತೆ ಬಂದರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.

