ಉಡುಪಿ: ಪರಶುರಾಮ ಥೀಮ್ ಪಾರ್ಕ್ ಕಟ್ಟಡದಲ್ಲಿ ತಾಮ್ರದ ಹೊದಿಕೆ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಕಳ ನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.


ಕಳವಾರು ನಿವಾಸಿ ಆರೀಫ್ ಯಾನೆ ಮುನ್ನ (37) ಹಾಗೂ ಕಾವೂರು ನಿವಾಸಿ ಅಬ್ದುಲ್ ಹಮೀದ್ (32) ಬಂಧಿತ ಆರೋಪಿಗಳು. ಆರೋಪಿಗಳ ಬಂಧನದ ಬೆನ್ನಲ್ಲೇ ಕಾರ್ಕಳ ಶಾಸಕ ಸುನಿಲ್ ಕುಮಾರ್ ಟ್ವೀಟ್ ಮೂಲಕ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ‘ಪರಶುರಾಮ ಥೀಂ ಪಾರ್ಕ್ ಮೇಲ್ಛಾವಣಿ ಕದ್ದವರು ಕಾಂಗ್ರೆಸ್ ಬ್ರದರ್ಸ್’ ಎಂದು ಟೀಕಿಸಿದ್ದಾರೆ.
ಪರಶುರಾಮ ಥೀಂ ಪಾರ್ಕ್ ಹಾಳು ಬೀಳುವಂತೆ ಮಾಡಿದ್ದು ಕಾಂಗ್ರೆಸ್, ಕಳೆದ ವಾರ ಥೀಮ್ ಪಾರ್ಕ್ ನಲ್ಲಿ ನಡೆದ ಕಳ್ಳತನ ಪ್ರಕರಣ ವಿಚಾರದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಅವರಿಗೆ ಅಭಿನಂದನೆಗಳು. ಭಾರತದ ಶ್ರದ್ಧಾ ಕೇಂದ್ರಗಳನ್ನು ಘಜ್ನಿ, ಘೋರಿ, ಖಿಲ್ಜಿ ಮೊಘಲರು ಒಡೆದರೆ, ಥೀಂ ಪಾರ್ಕ್ ಮೇಲ್ಚಾವಣಿ ಕದ್ದವರು ಅವರ ವಂಶಸ್ಥರು ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಕರಾವಳಿಯಲ್ಲಿ ಪರಶುರಾಮನ ಹೆಜ್ಜೆ ಗುರುತು ಇರಲೇಬಾರದು ಎಂದು ಥೀಮ್ ಪಾರ್ಕ್ ಕಾಮಗಾರಿಯನ್ನ ಅರ್ಧಕ್ಕೆ ನೀವು ನಿಲ್ಲಿಸಿದ್ದೀರಿ. ಈಗ ನಿಮ್ಮ ಮತ ಬ್ಯಾಂಕ್ ನ ಪುಂಡರು ಇಲ್ಲಿ ಕಳ್ಳತನ ಮಾಡಿದ್ದಾರೆ, ಇವರಿಗೆ ಈ ಧೈರ್ಯ ಬಂದಿದ್ದು ಎಲ್ಲಿಂದ ? ಕಾಂಗ್ರೆಸ್ನ ಹಿಂದೂ ವಿರೋಧಿ ಭಾವನೆ, ಬಲದಿಂದಲ್ಲವೇ? ಏನು ಬೇಕಾದರೂ ಮಾಡಿ ನಾವಿದ್ದೇವೆ ಎಂಬಾ ಚಿತಾವಣೆಯಿಂದಲೋ? ಇಂದು ಭಾವನೆಗಳಿಗೆ ಘಾಸಿ ಮಾಡಿರುವವರ ಜೊತೆಗೆ ಪ್ರವಾಸೋದ್ಯಮಕ್ಕೆ ಅಡ್ಡಿ ಮಾಡಿದ್ದೀರಿ.
ಮುಂದಿನ ಚುನಾವಣೆಯ ವರೆಗಲ್ಲ ಶತಶತಮಾನಗಳವರೆಗೂ ಸ್ಥಾಯಿಯಾಗಿರುತ್ತದೆ. ಇಲ್ಲಿಂದಲೇ ಕಾಂಗ್ರೆಸ್ ಅಧಃಪತನ ಕ್ಷಣಗಣನೆ ಪ್ರಾರಂಭ ಎಂದು ಸುನಿಲ್ ಕುಮಾರ್ ಟ್ವೀಟ್ ಮಾಡಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.

