ದುಬೈನಲ್ಲಿ ಭೀಕರ ರಸ್ತೆ ಅಪಘಾತ: ಏಳು ಮಂದಿ ಭಾರತೀಯ ಕಾರ್ಮಿಕರು ಸಾವು

Prakhara News
1 Min Read

ದುಬೈ : ಎಮಿರೇಟ್ಸ್ ರಸ್ತೆಯಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಏಳು ಮಂದಿ ಕಾರ್ಮಿಕರು ಸಾವನ್ನಪ್ಪಿದ್ದು, ಅವರಲ್ಲಿ ಹಲವರು ಭಾರತೀಯರಾಗಿದ್ದಾರೆ ಎಂದು ದುಬೈನಲ್ಲಿರುವ ಭಾರತೀಯ ದೂತಾವಾಸ ದೃಢಪಡಿಸಿದೆ. ಮಿನಿ ಬಸ್ ಹಾಗೂ ಟ್ರಕ್ ನಡುವೆ ಸಂಭವಿಸಿದ ಈ ಘರ್ಷಣೆಯಲ್ಲಿ ಒಂಬತ್ತು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.

ತಾಂತ್ರಿಕ ದೋಷದಿಂದಾಗಿ ರಸ್ತೆಯ ಮಧ್ಯದಲ್ಲಿ ನಿಂತಿದ್ದ ಟ್ರಕ್‌ಗೆ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಮಿನಿ ಬಸ್ ಹಿಂಬದಿಯಿಂದ ಬಲವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಮಿನಿ ಬಸ್ ನಜ್ಜುಗುಜ್ಜಾಗಿದ್ದು, ಸ್ಥಳದಲ್ಲೇ ಏಳು ಮಂದಿ ಕೊನೆಯುಸಿರೆಳೆದಿದ್ದಾರೆ.

ದುಬೈ ಪೊಲೀಸರ ಮಾಹಿತಿ ಪ್ರಕಾರ “ಬಸ್ ಚಾಲಕನ ಅಜಾಗರೂಕತೆ ಮತ್ತು ವಾಹನಗಳ ನಡುವೆ ಸುರಕ್ಷಿತ ಅಂತರ ಕಾಪಾಡಿಕೊಳ್ಳುವಲ್ಲಿ ವಿಫಲವಾಗಿರುವುದೇ ಈ ದುರಂತಕ್ಕೆ ಕಾರಣ. ಗಾಯಗೊಂಡ ಒಂಬತ್ತು ಮಂದಿಯಲ್ಲಿ ಐವರ ಸ್ಥಿತಿ ಗಂಭೀರವಾಗಿದ್ದು, ನಾಲ್ವರು ಮಧ್ಯಮ ಪ್ರಮಾಣದ ಗಾಯಗಳಿಗೆ ತುತ್ತಾಗಿದ್ದಾರೆ,” ಎಂದು ತಿಳಿಸಿದ್ದಾರೆ.

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ದುಬೈನಲ್ಲಿರುವ ಭಾರತೀಯ ದೂತಾವಾಸದ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಗಾಯಗೊಂಡಿರುವ ಭಾರತೀಯ ಪ್ರಜೆಗಳ ಆರೋಗ್ಯ ವಿಚಾರಿಸಿರುವ ಅಧಿಕಾರಿಗಳು, ಅಗತ್ಯವಿರುವ ಎಲ್ಲ ಕಾನೂನು ಮತ್ತು ವೈದ್ಯಕೀಯ ನೆರವು ನೀಡಲು ಸ್ಥಳೀಯ ಆರೋಗ್ಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿದ್ದಾರೆ. “ದುಬೈನಲ್ಲಿ ನಮ್ಮ ಕಾರ್ಮಿಕರು ಪ್ರಾಣ ಕಳೆದುಕೊಂಡಿರುವುದು ತೀವ್ರ ನೋವು ತಂದಿದೆ. ಮೃತರ ಕುಟುಂಬದೊಂದಿಗೆ ನಮ್ಮ ಪ್ರಾರ್ಥನೆಗಳಿವೆ,” ಎಂದು ದೂತಾವಾಸವು ‘X’ (ಟ್ವಿಟರ್) ಮೂಲಕ ಸಂತಾಪ ಸೂಚಿಸಿದೆ. ಮೃತರ ನಿಖರ ಸಂಖ್ಯೆ ಮತ್ತು ಹೆಸರುಗಳನ್ನು ದೃಢಪಡಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಮಿಷನ್ ತಿಳಿಸಿದೆ.

Share This Article
Leave a Comment