ಮಂಗಳೂರು: ಯುಪಿಐ ವಹಿವಾಟಿನ ಮೇಲೆ ಶುಲ್ಕ ವಿಧಿಸಲು ಹೊರಟಿರುವ ಸರ್ಕಾರದ ನಿಲುವು ‘ಡಿಜಿಟಲ್ ಇಂಡಿಯಾ’ ಆಶಯಕ್ಕೆ ಬಗೆದ ಬಹುದೊಡ್ಡ ದ್ರೋಹ ಹಾಗೂ ಹಿಮ್ಮುಖ ಚಲನೆಯ ಸಂಕೇತ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪದ್ಮರಾಜ್ ಆರ್.ಪೂಜಾರಿ ಆರೋಪಿಸಿದ್ದಾರೆ.


ಈ ಕುರಿತು ಹೇಳಿಕೆ ನೀಡಿದ ಅವರು, ಆರಂಭದಲ್ಲಿ ‘ಉಚಿತ ಮತ್ತು ಸರಳ’ ವ್ಯವಸ್ಥೆಯ ಆಮಿಷವೊಡ್ಡಿ ಇಡೀ ದೇಶವನ್ನು ಡಿಜಿಟಲ್ ವಹಿವಾಟಿಗೆ ಒಗ್ಗಿಸಿದ ನಂತರ, ಈಗ ಜನಸಾಮಾನ್ಯರ ಅಭ್ಯಾಸವನ್ನೇ ಬಂಡವಾಳವಾಗಿಸಿಕೊಂಡು ಶುಲ್ಕ ಹೇರಲು ಹೊರಟಿರುವುದು ಸರ್ಕಾರದ ಅಸಂಬದ್ಧ ನೀತಿಯನ್ನು ಎತ್ತಿ ತೋರಿಸುತ್ತದೆ ಎಂದು ಟೀಕಿಸಿದ್ದಾರೆ.
ಈ ಶುಲ್ಕವನ್ನು ವ್ಯಾಪಾರಿಗಳ ಮೇಲೆ (MDR) ವಿಧಿಸಲಾಗುತ್ತದೆ, ಗ್ರಾಹಕರಿಗಲ್ಲ ಎಂಬ ವಾದ ಕೇವಲ ಕಣ್ಣೊರೆಸುವ ತಂತ್ರವಷ್ಟೇ; ಕ್ರೆಡಿಟ್ ಕಾರ್ಡ್ನಂತೆಯೇ ವ್ಯಾಪಾರಿಗಳು ಈ ಹೊರೆಯನ್ನು ದಿನಸಿ, ಇಂಧನ ಹಾಗೂ ಅಗತ್ಯ ವಸ್ತುಗಳ ಬೆಲೆ ಹೆಚ್ಚಳದ ಮೂಲಕ ಅಂತಿಮವಾಗಿ ಸಾಮಾನ್ಯ ಜನರ ಜೇಬಿಗೇ ವರ್ಗಾಯಿಸಲಿದ್ದಾರೆ. ಅಲ್ಲದೆ, ₹1 ಲಕ್ಷದ ವರೆಗಿನ ವಿನಾಯಿತಿಯ ಸಂಕೀರ್ಣ ಜಿಎಸ್ಟಿ ಲೆಕ್ಕಾಚಾರಗಳು ಸಣ್ಣ ವ್ಯಾಪಾರಿಗಳಲ್ಲಿ ಅನಿಶ್ಚಿತತೆ ಮೂಡಿಸಿ, ಕ್ಯೂಆರ್ ಕೋಡ್ ಮರೆಮಾಚಿ ಮತ್ತೆ “ನಗದನ್ನೇ ನೀಡಿ” ಎಂದು ಒತ್ತಾಯಿಸುವಂತೆ ಮಾಡುತ್ತದೆ. ಪರಿಣಾಮವಾಗಿ, ₹2,000 ಮೇಲ್ಪಟ್ಟ ವಹಿವಾಟುಗಳಿಗೆ ಶುಲ್ಕ ಮತ್ತು ತೆರಿಗೆ ಉಳಿಸಲು ಜನರು ಮತ್ತೆ ನಗದಿನ ಮೊರೆಹೋಗಲಿದ್ದು, ಇದು ಪಾರದರ್ಶಕ ಆರ್ಥಿಕತೆಗೆ ಅಡ್ಡಿಯಾಗಿ ಕಪ್ಪುಹಣದ ಚಲಾವಣೆಯನ್ನು ಮತ್ತೆ ಹೆಚ್ಚಿಸಲಿದೆ. ಆರ್ಥಿಕತೆಯನ್ನು ನಗದು ರಹಿತವಾಗಿಸುವ ಪ್ರಕ್ರಿಯೆಯನ್ನು ಉತ್ತೇಜಿಸುವ ಬದಲು, ಅದನ್ನೇ ಹೊರೆಯಾಗಿಸಿ ಬ್ಯಾಂಕಿಂಗ್ ಲಾಬಿಗೆ ಮಣಿದಿರುವ ಸರ್ಕಾರದ ಈ ನಡೆ ಖಂಡನೀಯ ಎಂದು ಹೇಳಿಕೆ ನೀಡಿದ್ದಾರೆ.


