ಚಾಮರಾಜನಗರ: ಕಳೆದ ವರ್ಷ ನವಜಾತ ಹೆಣ್ಣುಮಗು ನಾಪತ್ತೆಯಾಗಿದ್ದ ಪ್ರಕರಣದಲ್ಲಿ ಪೋಷಕರು ಸೇರಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ.
ಚಾಮರಾಜನಗರ ಪಟ್ಟಣದ ರಾಮಸಮುದ್ರ ನಿವಾಸಿಗಳಾದ ಸಿಂಧು ಮತ್ತು ಮಂಜುನಾಯಕ 3 20250 ಜು.26ರಂದು ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಹೆಣ್ಣುಮಗು ಜನಿಸಿತ್ತು. ಆದರೆ ನವಜಾತ ಶಿಶು ಪೋಷಕರ ವಶದಲ್ಲಿಲ್ಲ ಎಂಬುದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ 2025ರ ಸೆ.15ರಂದು ಪೊಲೀಸ್ ಠಾಣೆಗೆ ದೂರು ದಾಖಲಾಗಿತ್ತು.


ದೂರು ಆಧರಿಸಿ ತನಿಖೆ ಕೈಗೊಂಡ ಪೊಲೀಸರು, ಜ.23ರಂದು ಸಿಂಧು ಮತ್ತು ಮಂಜುನಾಯಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಡಿ.ಗ್ರೂಪ್ ನೌಕರಳಾಗಿ ಕಾರ್ಯನಿರ್ವಹಿಸುತ್ತಿದ್ದ ಶಾಂತ ಎಂಬುವರ ಮಧ್ಯವರ್ತಿತ್ವದಲ್ಲಿ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕು ಕೊಣನೂರು ಗ್ರಾಮದ ಜವರಯ್ಯ ಮತ್ತು ನೇತ್ರಾ ದಂಪತಿಗೆ ನವಜಾತ ಶಿಶುವನ್ನು 50,000 ರೂ. ಗೆ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ.
ತನಿಖೆ ವೇಳೆ ಸುಮಾರು ಆರು ತಿಂಗಳಿಂದ ಜವರಯ್ಯ ಮತ್ತು ನೇತ್ರಾ ದಂಪತಿಯ ಆಶ್ರಯದಲ್ಲಿದ್ದ ಶಿಶುವನ್ನು ಪೊಲೀಸರು ರಕ್ಷಿಸಿ, ಶಿಶು ಅಭಿವೃದ್ಧಿ ಇಲಾಖೆಯ ವಶಕ್ಕೆ ಒಪ್ಪಿಸಿದ್ದು, ಮಗು ಆರೋಗ್ಯವಾಗಿರುವುದಾಗಿ ತಿಳಿದುಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು ಆರು ತಿಂಗಳ ಕಾಲ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ತಾಂತ್ರಿಕ ಮತ್ತು ವೈಜ್ಞಾನಿಕ ತನಿಖಾ ವಿಧಾನಗಳ ಮೂಲಕ ಪತ್ತೆಹಚ್ಚಲಾಗಿದ್ದು, ಮಗುವಿನ ತಂದೆ ಮಂಜುನಾಯಕ, ತಾಯಿ ಸಿಂಧು, ಮಧ್ಯವರ್ತಿಯಾದ ಶಾಂತ ಹಾಗೂ ಅಕ್ರಮವಾಗಿ ಮಗುವನ್ನು ಪಡೆದ ಜವರಯ್ಯ ಮತ್ತು ನೇತ್ರಾ ದಂಪತಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಎಲ್ಲಾ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದುಬಂದಿದೆ.

