ತುಳು ಭಾಷೆ ರಾಜ್ಯದ ಎರಡನೇ ಅಧಿಕೃತ ಭಾಷೆ ಎಂದು ಮಂಗಳೂರಲ್ಲಿ ನಡೆಯಲಿರುವ ರಾಜ್ಯ ಸಚಿವ ಸಂಪುಟದಲ್ಲೇ ಅಂತಿಮ ನಿರ್ಣಯವಾಗಬೇಕು: ಶಾಸಕ ವೇದವ್ಯಾಸ್ ಕಾಮತ್

Prakhara News
1 Min Read

ಮಂಗಳೂರು: ತುಳು ಭಾಷೆ ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಬೇಕೆಂಬ ತುಳುವರ ಒಕ್ಕೊರಲ ಬೇಡಿಕೆಯನ್ನು ಪರಿಗಣಿಸಿ ಸೆಪ್ಟೆಂಬರ್ 18 ರಂದು ಮಂಗಳೂರಲ್ಲಿ ನಡೆಯಲಿರುವ ರಾಜ್ಯ ಸಚಿವ ಸಂಪುಟದಲ್ಲಿ ಅಂತಿಮ ನಿರ್ಣಯ ಕೈಗೊಳ್ಳಬೇಕೆಂದು ಶಾಸಕ ವೇದವ್ಯಾಸ ಕಾಮತ್ ರವರು ಸರ್ಕಾರಕ್ಕೆ ಆಗ್ರಹಿಸಿದರು.

ಈ ಬಗ್ಗೆ ನಾನು ಶಾಸಕನಾದಾಗಿನಿಂದಲೂ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ, ತುಳು ಪರ ಹೋರಾಟಗಾರರೊಂದಿಗೆ ತುಳು ಲಿಪಿ ಶಾಸನ, ಸಾವಿರಾರು ವರ್ಷಗಳ ಇತಿಹಾಸವಿರುವ ತಾಳೆ ಓಲೆಗಳು, ಪಾಡ್ದನ, ದೈವಾರಾಧನೆಯ ನುಡಿಗಳು, ತುಳುನಾಡಿನ ಪುರಾತನ ದೇವಸ್ಥಾನ ಹಾಗೂ ದೈವಸ್ಥಾನಗಳಲ್ಲಿ ಬಳಕೆಯಾದ ತುಳು ಭಾಷೆಯ ಸಂಸ್ಕಾರ, ತುಳು ಸಾಹಿತ್ಯ, ತುಳು ಕ್ಯಾಲೆಂಡರ್, ತುಳು ಪತ್ರಿಕೆ, ಸೇರಿದಂತೆ ಅನೇಕ ಪೂರಕ ದಾಖಲೆಗಳನ್ನು ಹೊಂದಿಸಿಕೊಂಡು ಸರ್ಕಾರಕ್ಕೆ ಪ್ರಸ್ತುತ ಪಡಿಸಲಾಗಿತ್ತು. ಅಂದು ಸಚಿವರಾಗಿದ್ದ ಸುನಿಲ್ ಕುಮಾರ್ ಕಾರ್ಕಳ ರವರು ಡಾ.ಮೋಹನ್ ಆಳ್ವರ ಸಮಿತಿಯನ್ನೂ ರಚಿಸಿದ್ದರು. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಸಮಿತಿಯ ವರದಿ ಅನುಷ್ಠಾನಕ್ಕೆ ಬರದಿರುವುದು ಬೇಸರದ ಸಂಗತಿ ಎಂದರು.

ತುಳುವರ ಹೋರಾಟ, ಒತ್ತಾಸೆಗೆ ಅನುಗುಣವಾಗಿ ಬಹುತೇಕ ಕೆಲಸಗಳು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೇ ಪೂರ್ಣಗೊಂಡಿದ್ದು, ಕೊನೆಯ ಹಂತದ ಕಾರ್ಯಗಳು ಮಾತ್ರ ಬಾಕಿ ಇವೆ. ಅದನ್ನು ಶೀಘ್ರದಲ್ಲಿ ಮುಗಿಸುವ ನಿಟ್ಟಿನಲ್ಲಿ ಮಂಗಳೂರಲ್ಲಿ ನಡೆಯಲಿರುವ ರಾಜ್ಯ ಸಚಿವ ಸಂಪುಟದಲ್ಲೇ ಅಂತಿಮ ನಿರ್ಣಯವಾಗಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.

Share This Article
Leave a Comment