ಮಂಗಳೂರು : ಮಂಗಳೂರಿನ ಹಳೆ ಬಂದರಿನ (ದಕ್ಕೆ) ಸಮೀಪ ಅಳಿವೆಬಾಗಿಲು ದಾಟುತ್ತಿದ್ದಂತೆ ‘ಅಯಾನ್’ ಎಂಬ ಹೆಸರಿನ ಟ್ರಾಲರ್ ಬೋಟ್ ಬೃಹತ್ ಅಲೆಗಳು ಹಾಗೂ ಬಿರುಗಾಳಿಯ ರಭಸಕ್ಕೆ ಸಿಲುಕಿ ಮುಳುಗಡೆಯಾಗಿದೆ. ಬೋಟ್ನಲ್ಲಿದ್ದ ಎಲ್ಲಾ 6 ಮಂದಿ ಮೀನುಗಾರರನ್ನು ಸಮೀಪದಲ್ಲಿದ್ದ ಇತರ ಬೋಟ್ಗಳ ಮೀನುಗಾರರು ಸಮಯಪ್ರಜ್ಞೆ ಮೆರೆದು ಸುರಕ್ಷಿತವಾಗಿ ರಕ್ಷಿಸಿದ್ದಾರೆ.


ಬಂಟ್ವಾಳ ತಾಲೂಕು ನಿವಾಸಿ ಇಬ್ರಾಹಿಂ ಖಲೀಲ್ ಮೂಸಾ ಅವರಿಗೆ ಸೇರಿದ ‘ಅಯಾನ್’ ಟ್ರಾಲರ್ ಬೋಟ್ ಶನಿವಾರ ಸಂಜೆ ಧಕ್ಕೆಯಿಂದ ‘ಕರೆ ಫಿಶಿಂಗ್’ಗೆ ಹೊರಟಿತ್ತು. ಬೋಟ್ ಅಳಿವೆಬಾಗಿಲನ್ನು ಸಲ್ಪವೇ ದಾಟುತ್ತಿದ್ದಂತೆ ತೀವ್ರ ಗಾಳಿ ಮತ್ತು ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ನಿಯಂತ್ರಣ ತಪ್ಪಿ ಮುಳುಗಲು ಆರಂಭಿಸಿದೆ. ಬೋಟ್ನ ಮುಂಭಾಗ ನೀರ ಮೇಲೆ ತೇಲುತ್ತಾ ಮುಳುಗಡೆಯಾಗುತ್ತಿದ್ದ ದೃಶ್ಯ ಸ್ಥಳೀಯರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಬೋಟ್ ಮುಳುಗಡೆಯಾಗುತ್ತಿದ್ದಂತೆಯೇ ಪ್ರಾಣಾಪಾಯದಲ್ಲಿದ್ದ 6 ಮಂದಿ ಸಿಬ್ಬಂದಿಯನ್ನು ಕಂಡು ತಕ್ಷಣವೇ ಸ್ಪಂದಿಸಿದ ಸಮೀಪದ ಇತರ ಬೋಟ್ನ ಮೀನುಗಾರರು, ಹಗ್ಗ ಹಾಗೂ ರಕ್ಷಣಾ ಉಪಕರಣಗಳನ್ನು ಬಳಸಿ ಆರೂ ಮಂದಿಯನ್ನು ತಮ್ಮ ಬೋಟಿಗೆ ಸ್ಥಳಾಂತರಿಸಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.

ಈ ಬಗ್ಗೆ ಸ್ಪಷ್ಟನೆ ನೀಡಿದ ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕಿ ದರ್ಶನಾ ಕೆ.ಟಿ., “ಸ್ಥಳೀಯ ಮೀನುಗಾರರ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ಬೋಟ್ನಲ್ಲಿದ್ದ ಎಲ್ಲಾ 6 ಮಂದಿ ಮೀನುಗಾರರು ಸುರಕ್ಷಿತವಾಗಿದ್ದು, ಯಾವುದೇ ಜೀವಹಾನಿ ಸಂಭವಿಸಿಲ್ಲ” ಎಂದು ತಿಳಿಸಿದ್ದಾರೆ.


