ಮಂಗಳೂರು : ವಿಧಾನಸಭಾ ಅಧಿವೇಶನದ ಕಲಾಪಕ್ಕೆ ಪ್ರತಿಪಕ್ಷ ಅಡ್ಡಿಪಡಿಸುತ್ತಿರುವುದಕ್ಕೆ ಆರೋಗ್ಯ ಸಚಿವ ಯು.ಟಿ. ಖಾದರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿವೇಶನ ಜನರ ಸಮಸ್ಯೆಗಳನ್ನು ಚರ್ಚಿಸುವ ವೇದಿಕೆಯಾಗಬೇಕು. ಆದರೆ ಕಲಾಪಕ್ಕೆ ಅಡ್ಡಿಪಡಿಸುವ ಮೂಲಕ ಜನರ ಹಣ ವ್ಯರ್ಥ ಮಾಡಲಾಗುತ್ತಿದೆ ಎಂದು ಆರೋಪಿಸಿದರು.


ನಾಗೇಂದ್ರ ಪ್ರಕರಣದ ವಿಚಾರದಲ್ಲಿ ತನಿಖೆ ನಡೆದಿದ್ದು, ಕಾನೂನುಬದ್ಧವಾಗಿ ಸಚಿವ ಸ್ಥಾನ ನೀಡಲಾಗಿದೆ. ಈ ವಿಚಾರವನ್ನು ಸದನದಲ್ಲೇ ಚರ್ಚಿಸಬಹುದಿತ್ತು. ಪ್ರತಿಭಟನೆಗೆ ಅವಕಾಶವಿದೆ, ಆದರೆ ಸದನದ ಕಲಾಪಕ್ಕೆ ಅಡ್ಡಿಪಡಿಸುವುದು ಸರಿಯಲ್ಲ ಎಂದರು.

ನಕಲಿ ಔಷಧ ಜಾಲದ ಹಿಂದೆ ದೊಡ್ಡ ಜಾಲ?.ನಕಲಿ ಔಷಧಗಳ ಜಾಲ ಗಂಭೀರ ಸ್ವರೂಪದ್ದಾಗಿದ್ದು, ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ ಎಂದು ಖಾದರ್ ಹೇಳಿದರು. ಹಿಮಾಚಲ ಪ್ರದೇಶ ಮತ್ತು ತೆಲಂಗಾಣದಲ್ಲಿ ಅನಧಿಕೃತವಾಗಿ ಔಷಧ ತಯಾರಿಸಿ ಪ್ರತಿಷ್ಠಿತ ಕಂಪನಿಗಳ ಹೆಸರಿನಲ್ಲಿ ಮಾರಾಟ ಮಾಡುತ್ತಿರುವ ಮಾಹಿತಿ ಲಭ್ಯವಾಗಿದೆ.

ತುರ್ತು ಚಿಕಿತ್ಸೆಯ ಔಷಧಗಳೂ ಈ ಜಾಲದಲ್ಲಿರುವ ಸಾಧ್ಯತೆ ಇರುವುದರಿಂದ ಎಸ್ಐಟಿ ತನಿಖೆ ನಡೆಸಲಿದೆ ಎಂದರು. ಆಹಾರ–ಔಷಧ ದೂರುಗಳಿಗೆ ಕ್ಯೂಆರ್ ಕೋಡ್ ಆಹಾರ ಮತ್ತು ಔಷಧಗಳ ಗುಣಮಟ್ಟದ ಬಗ್ಗೆ ಸಾರ್ವಜನಿಕರು ನೇರವಾಗಿ ದೂರು ನೀಡಲು ಹೋಟೆಲ್ಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕ್ಯೂಆರ್ ಕೋಡ್ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಈಗಾಗಲೇ ವಿವಿಧ ಕ್ಷೇತ್ರಗಳಿಂದ 400ಕ್ಕೂ ಅಧಿಕ ದೂರುಗಳು ಬಂದಿವೆ.
ತಪ್ಪು ಕಂಡುಬಂದ ತಕ್ಷಣ ವ್ಯಾಪಾರ ಬಂದ್ ಮಾಡುವುದು ಉದ್ದೇಶವಲ್ಲ ; ಮೊದಲು ತಪ್ಪು ಸರಿಪಡಿಸಲು ಅವಕಾಶ ನೀಡಲಾಗುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದರು. ತಾಲೂಕು ಮಟ್ಟದಲ್ಲಿ ವಾಚ್ಟೀಮ್ ರಚಿಸುವ ಚಿಂತನೆಯಿದ್ದು, ಕೃತಕ ಪನ್ನೀರ್, ಕೃತಕ ಬಣ್ಣ ಹಾಗೂ ನಿಕೋಟಿನ್ಯುಕ್ತ ಗುಟ್ಕಾ–ಪಾನ್ಮಸಾಲಾ ವಿರುದ್ಧ ಕ್ರಮ ಮುಂದುವರಿಯಲಿದೆ ಎಂದು ಖಾದರ್ ತಿಳಿಸಿದರು.
ಕೆ.ಎಸ್. ರಾವ್ ರಸ್ತೆಯ KFCಯಲ್ಲಿ ಕೊಳೆತ ಮಾಂಸ ಪತ್ತೆಯಾದ ಬಳಿಕ ಮತ್ತೆ ಕಾರ್ಯನಿರ್ವಹಿಸುತ್ತಿರುವ ವಿಚಾರಕ್ಕೆ ಆರೋಗ್ಯ ಸಚಿವ ಯು.ಟಿ. ಖಾದರ್ ಪ್ರತಿಕ್ರಿಯಿಸಿದ್ದಾರೆ.
“ರೈಡ್ ಮಾಡಿದ್ದು ಶಿಕ್ಷೆ ನೀಡಲೇಬೇಕು ಎಂಬ ಉದ್ದೇಶದಿಂದಲ್ಲ. ಅವರು ವ್ಯಾಪಾರ ಮಾಡಬೇಕು, ಜೊತೆಗೆ ತಪ್ಪನ್ನು ಸರಿಪಡಿಸಿಕೊಳ್ಳಬೇಕು. ಯಾರ ವ್ಯಾಪಾರವನ್ನೂ ಬಂದ್ ಮಾಡಿಲ್ಲ. ವಿಪರೀತ ಅವ್ಯವಸ್ಥೆ ಕಂಡುಬಂದಲ್ಲಿ ಕ್ರಮ ಕೈಗೊಂಡಿದ್ದೇವೆ. ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ” ಎಂದರು.


