ತೆಲಂಗಾಣದಲ್ಲಿ ಜರುಗಿದ 16ನೇ ದಕ್ಷಿಣ ವಲಯ ಮಹಿಳಾ ‘ ನೆಟ್ ಬಾಲ್ ‘ ಕ್ರೀಡಾ ಕೂಟದ ಮಹಿಳಾ ಟ್ರೆಡಿಷನಲ್ ವಿಭಾಗದಲ್ಲಿ ಸ್ಪರ್ಧಿಸಿ ಚಿನ್ನದ ಪದಕ ವಿಜೇತ ತಂಡದ ಸದಸ್ಯೆ ಕುಮಾರಿ ಸುರಕ್ಷಾ ಹಾಗೂ ತುಳುನಾಡಿನ ಪ್ರಸಿದ್ದ ವೃತ್ತಿಪರ ನಾಟಕ ತಂಡಗಳಲ್ಲೊಂದಾದ ‘ ಲಕುಮಿ ‘ ತಂಡದ ನೇತಾರ ಲ|ಕಿಶೋರ್ ಡಿ.ಶೆಟ್ಟಿ ಅವರನ್ನು ಇತ್ತೀಚೆಗೆ ಶ್ರೀ ಕಾಳಿಕಾಂಬಾ ಸೇವಾ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು. ಮಂಗಳೂರು ರಥಬೀದಿಯ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ನಡೆಯುತ್ತಿರುವ ಯುಗಾದಿ ಮಹೋತ್ಸವದ ಪ್ರಥಮ ದಿನದ ಸಾಂಸ್ಕೃತಿಕ ಕಾರ್ಯಕ್ರಮ ಸಂಯೋಜಿಸಿದ್ದ ಸೇವಾ ಸಮಿತಿಯು ಈ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಶ್ರೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ, ಪಡುಕುತ್ಯಾರು ಇಲ್ಲಿನ ಪೀಠಾಧಿಪತಿಗಳಾದ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಜಿಯವರು ಸಾಧಕರೀರ್ವರನ್ನು ಶಾಲು, ಫಲವಸ್ತು, ಹಾರ,ಸ್ಮರಣಿಕೆ ಸಹಿತ ಮಂತ್ರಾಕ್ಷತೆಯನ್ನಿತ್ತು ಹರಸಿದರು. ಈ ಸಂದರ್ಭ ಶ್ರೀ ಕಾಳಿಕಾಂಬಾ ಸೇವಾ ಸಮಿತಿಯ ಅಧ್ಯಕ್ಷ ಜೆ.ವಿವೇಕ್, ಉಪಾಧ್ಯಕ್ಷ ಸೂರಜ್ ಎಂ.ಕದ್ರಿ, ಕಾರ್ಯದರ್ಶಿ ಜಗದೀಶ್ ಸಿದ್ಧಕಟ್ಟೆ, ಶ್ರೀ ಕ್ಷೇತ್ರದ ಆಡಳಿತಾಧಿಕಾರಿ ಉಮೇಶ್ ಆಚಾರ್ಯ ಪಾಂಡೇಶ್ವರ, ಸಾಂಸ್ಕೃತಿಕ ಸಂಚಾಲಕ ಶ್ಯಾಮ್ ಡಿ.ಆಚಾರ್ಯ, ಸಹ ಸಂಚಾಲಕ ಪಿ.ರವೀಂದ್ರ ಮಂಗಳಾದೇವಿ ಹಾಗೂ ಹಿರಿಯ ಕಾರ್ಯಕರ್ತ ಟಿ.ಜಯಕರ ಆಚಾರ್ಯ ಉಪಸ್ಥಿತರಿದ್ದರು. ಪಶುಪತಿ ಉಳ್ಳಾಲ ನಿರೂಪಿಸಿದರು.


