ಮಂಗಳೂರು: ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಭೀಕರ ದುರಂತವೊಂದು ಸಂಭವಿಸಿದ್ದು. ಕಂಕನಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ನಾಗುರಿ ಬಳಿಯ ಗರೋಡಿಯಲ್ಲಿ ತಡೆಗೋಡೆಯೊಂದು ಮನೆಗಳ ಮೇಲೆ ಕುಸಿದು ಬಿದ್ದಿದೆ. ಈ ಘಟನೆಯಲ್ಲಿ ಹೆಂಚಿನ ಛಾವಣಿಯ ಮನೆಗಳು ಕುಸಿದು ಬಿದ್ದು. ಮಹಿಳೆಯೊಬ್ಬರು ಹಾಗೂ ಇಬ್ಬರು ಬಾಲಕಿಯರು ಮೃತಪಟ್ಟಿದ್ದಾರೆ.


ಬುಧವಾರ ಮುಂಜಾನೆ ಸುಮಾರು 4:45 ರಿಂದ 5:00 ಗಂಟೆಯ ಅವಧಿಯಲ್ಲಿ ಗರೋಡಿಯ ‘ಮರಿಯಲ್ ಹೌಸ್” ಎಂಬಲ್ಲಿ ಈ ಘಟನೆ ನಡೆದಿದೆ.

ಅವಶೇಷಗಳಡಿ ಸಿಲುಕಿದ್ದ ಆರು ಮಂದಿ ದುರಂತ ಸಂಭವಿಸಿದ ಜಾಗದಲ್ಲಿ ತಡೆಗೋಡೆಯ ಕೆಳಭಾಗದಲ್ಲಿದ್ದ ಬಾಡಿಗೆ ಮನೆಗಳಲ್ಲಿ ಒಟ್ಟು ನಾಲ್ಕು ಕುಟುಂಬಗಳು ವಾಸವಾಗಿದ್ದವು. ತಡೆಗೋಡೆ ಕುಸಿದ ರಭಸಕ್ಕೆ ನಾಲ್ಕೂ ಮನೆಗಳ ಹಿಂಭಾಗದ ಗೋಡೆಗಳು ಕುಸಿದು ಬಿದ್ದಿದ್ದು, ಈ ಪೈಕಿ ಎರಡು ಕುಟುಂಬಗಳಿಗೆ ತೀವ್ರ ಹಾನಿಯಾಗಿದೆ. ಮನೆಗಳು ಕುಸಿದ ಸಂದರ್ಭದಲ್ಲಿ ಒಟ್ಟು ಆರು ಮಂದಿ ಅವಶೇಷಗಳಡಿ ಸಿಲುಕಿಕೊಂಡಿದ್ದರು.

ಘಟನೆ ನಡೆದ ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದ್ದು, ಒಬ್ಬ ಪುರುಷ ಹಾಗೂ ಇಬ್ಬರು ಬಾಲಕಿಯರನ್ನು ಸುರಕ್ಷಿತವಾಗಿ ಹೊರತೆಗೆದು ಚಿಕಿತ್ಸೆಗಾಗಿ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಅವಶೇಷಗಳಡಿ ಸಿಲುಕಿದ್ದ ಮತ್ತೊಬ್ಬ ಮಹಿಳೆ ಹಾಗೂ ಇಬ್ಬರು ಬಾಲಕಿಯರನ್ನು ಹೊರತೆಗೆಯುವಷ್ಟರಲ್ಲಿ ಅವರು ಮೃತಪಟ್ಟಿರುವುದು ದೃಢಪಟ್ಟಿದೆ.
ಹಾನಿಗೊಳಗಾದ ಕುಟುಂಬಗಳ ವಿವರ:
ಮೊದಲ ಕುಟುಂಬ (ಬಿಹಾರ ಮೂಲದವರು): ಕಳೆದ 8 ವರ್ಷಗಳಿಂದ ಇಲ್ಲಿ ವಾಸವಿದ್ದ ಲಾಲ್ಬಾಬು (37) ಮತ್ತು ಅವರ ಪತ್ನಿ ಇಂದು (34) ದಂಪತಿಗೆ ನಾಲ್ವರು ಹೆಣ್ಣು ಮಕ್ಕಳಿದ್ದಾರೆ. ಅಲ್ಕಾ (14), ಅನುಷ್ಕಾ (11), ಅನಾಮಿಕಾ (7) ಮತ್ತು ತನು (3). ಘಟನೆಯಲ್ಲಿ ಪೋಷಕರು ಹಾಗೂ ಇಬ್ಬರು ಮಕ್ಕಳನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆಯಾದರೂ, ಇಬ್ಬರು ಬಾಲಕಿಯರು ದುರದೃಷ್ಟವಶಾತ್ ಮೃತಪಟ್ಟಿದ್ದಾರೆ.
ಎರಡನೇ ಕುಟುಂಬ (ಉಡುಪಿ ಮೂಲದವರು): ಕಳೆದ 8 ತಿಂಗಳಿನಿಂದ ಇಲ್ಲಿ ವಾಸವಿದ್ದ ಬಾಲಕೃಷ್ಣ (40) ಮತ್ತು ಶಾಂತಾ (35) ದಂಪತಿ. ಘಟನೆಯಲ್ಲಿ ಬಾಲಕೃಷ್ಣ ಅವರು ಸುರಕ್ಷಿತವಾಗಿ ಪಾರಾಗಿದ್ದು, ಪತ್ನಿ ಶಾಂತಾ ಅವರು ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಅಧಿಕಾರಿಗಳ ಭೇಟಿ: ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ದರ್ಶನ್ ಅವರು ತಕ್ಷಣವೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.



