ಮಂಗಳೂರು: ಮುಲ್ಕಿಯಲ್ಲಿ ನಡೆದ ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಬೆಳ್ಳಿಹಬ್ಬ ಸಂಭ್ರಮದಲ್ಲಿ ಭಾಗವಹಿಸಿ ನಾನು ಬಿಲ್ಲವ ಸಂಘಟನೆಗಳು ಬಿಲ್ಲವರಿಗೆ ಏನು ಮಾಡಿದೆ ಎಂದು ಪ್ರಶ್ನಿಸಿದ್ದೆನೇ ಹೊರತು, ಬೆಳ್ತಂಗಡಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಮಯ್ಯ ಪರ ಎಲ್ಲಿಯೂ ಓಟು ಕೇಳಿಲ್ಲ ಎಂದು ಮುಲ್ಕಿ – ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು, ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ಹಾಗೂ ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷರು ಪದಾಧಿಕಾರಿಗಳು ಆ ಸಭೆಯಲ್ಲಿದ್ದರು.



ಈ ಸಂಘಟನೆಗಳು ದೊಡ್ಡದೊಡ್ಡ ಕಾರ್ಯಕ್ರಮಗಳನ್ನು ಮಾಡುತ್ತದೆ. ಆದರೆ ಬಿಲ್ಲವ ಸಂಘಟನೆಗಳಾಗಿ ಬಿಲ್ಲವರಿಗೆ ಏನು ಮಾಡಿದೆ ಎಂಬ ಪ್ರಶ್ನೆಯನ್ನು ನಾನು ಅವರಿಗೆ ಕೇಳಿದ್ದು. ಬಿಲ್ಲವರಿಗೆ ರಾಜಕೀಯ ಪ್ರಾಶಸ್ತ್ಯ ದೊರಕಿಲ್ಲ ಎಂದು ಹೇಳುವ ನೀವು ಏನು ಮಾಡಿದ್ದೀರಿ?. ದೊಡ್ಡ ಸಮಾವೇಶ ಮಾಡಿದಾಕ್ಷಣ ಅದು ಬಿಲ್ಲವರಿಗೆ ಮುಟ್ಟುವುದಿಲ್ಲ. ಸಮುದಾಯದ ಕಟ್ಟಕಡೆಯ ವ್ಯಕ್ತಿಗೆ ನಿಮ್ಮ ಸಂಘಟನೆಗಳಿಂದ ಏನು ಸಿಕ್ಕಿದೆ ಎಂಬುದು ನನ್ನ ಪ್ರಶ್ನೆ ಎಂದು ಹೇಳಿದರು. ಬಿಲ್ಲವರು ಚುನಾವಣೆಗೆ ನಿಂತಾಗ ಆರ್ಥಿಕ ಹಾಗೂ ನೈತಿಕ ಬೆಂಬಲ ನೀಡಿದ್ದೀರಿ ಎಂದು ಸಂಘಟನೆಯ ನಾಯಕರುಗಳಿಗೆ ಪ್ರಶ್ನಿಸಿದಾಗ ಸತೀಶ್ ಕುಂಪಲ, ಸುನಿಲ್ ಕುಮಾರ್ ಹಾಗೂ ನನ್ನ ಹೆಸರನ್ನು ಎತ್ತಿದ್ದೆ. ಹಾಗೆ ಮಾತನಾಡುವಾಗ ಬೆಳ್ತಂಗಡಿ ವಿಧಾನಸಭಾ ಚುನಾವಣಾ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಮಯ್ಯರ ಹೆಸರು ಎತ್ತಿದ್ದೆ.

ನನ್ನ ಇಡೀ ಭಾಷಣ ಎರಡು ಸಂಘಟನೆಗಳ ಇಬ್ಬರು ನಾಯಕರಿಗಿತ್ತೇ ಹೊರತು, ರಕ್ಷಿತ್ ಶಿವರಾಮಯ್ಯರಿಗೆ ಯಾಕೆ ಓಟು ಹಾಕಿಲ್ಲ ಎಂದು ಎಲ್ಲಿಯೂ ಹೇಳಿಲ್ಲ. ಆದರೆ ಕೆಲ ವಿಘ್ನಸಂತೋಷಿಗಳು ಏನೇನೋ ತಿರುಚಿ ಎಲ್ಲೆಲ್ಲಿಗೆ ಕೊಂಡೊಯ್ಯುತ್ತಿದ್ದಾರೆ.ನಾನು ಎರಡೂ ಬಾರಿ ಚುನಾವಣೆಗೆ ನಿಂತಾಗ ಎಲ್ಲರೂ ಜಾತಿ ಬೇಧ ಮರೆತು ಮತ ಹಾಕಿದ್ದಾರೆ. ಆದ್ದರಿಂದ ಬಿಲ್ಲವ ಸಂಘಟನೆಗಳು ಏನು ಮಾಡಿದೆ ಎಂದು ಪ್ರಶ್ನಿಸಿದ್ದೇನೆ.