ಪ್ರಿಯಕರನ ಜೊತೆ ಓಡಿ ಹೋದ ಯುವತಿ: ಗೆಳತಿಯ ತಂದೆ ಬೈದಿದ್ದಕ್ಕೆ ಯುವಕ ಆತ್ಮಹತ್ಯೆ

Prakhara News
1 Min Read

ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲೂಕಿನ ಕುಡ್ಲೂರು ಗ್ರಾಮದಲ್ಲಿ ಯುವತಿಯೊಬ್ಬಳು ಪ್ರಿಯಕರನ ಜೊತೆ ಓಡಿ ಹೋಗಿರುವುದಕ್ಕೆ ಯುವತಿಯ ತಂದೆ ಆಕೆಯ ಸ್ನೇಹಿತನಿಗೆ ಬೈದಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ಮೃತನನ್ನ ಚಂದನ್ (20) ಎಂದು ಗುರುತಿಸಲಾಗಿದೆ. ಕುಡ್ಲೂರು ಗ್ರಾಮದ 18 ವರ್ಷದ ಯುವತಿಯೊಬ್ಬಳು ಪತ್ರ ಬರೆದಿಟ್ಟು ತನ್ನ ಪ್ರಿಯಕರನ ಜೊತೆ ಜೂ.14 ರಂದು ಹೋಗಿದ್ದಳು. ಈ ಬಗ್ಗೆ ಯುವತಿಯ ತಂದೆ ಆಕೆಯ ಸ್ನೇಹಿತ‌ ಚಂದನ್‌ಗೆ ಆಕೆ ಹೋಗಲು ನೀನೇ ಕಾರಣ, ಎಲ್ಲಿದ್ದಾಳೆ ಅಂತ ಗೊತ್ತು ಹೇಳು ಎಂದು ಗಲಾಟೆ ಮಾಡಿದ್ದರು. ನಾಪತ್ತೆ ಪ್ರಕರಣ ದಾಖಲಾದ ಬೆನ್ನಲ್ಲೇ ಮೊಬೈಲ್ ಕಾಲ್ ಲೀಸ್ಟ್ ಆಧಾರದ ಮೇಲೆ ಕಡೂರು ತಾಲೂಕಿನ ಬೀರೂರು ಪೊಲೀಸರು ಚಂದನ್‌ನನ್ನ‌ ಕರೆಸಿ ವಿಚಾರಣೆ ಮಾಡಿ ಕಳುಹಿಸಿದ್ದರು. ಆದರೆ, ಜೂ.21ರ ಸಂಜೆ ವಿಚಾರಣೆ ಮುಗಿಸಿಕೊಂಡು ಮನೆಗೆ ಹೋದ ಚಂದನ್ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಸಾಯುವ ಮುನ್ನ ತನ್ನ ತಾಯಿಗೆ ಯುವಕ ಮೆಸೇಜ್‌ ಮಾಡಿ, ಆ ಹುಡುಗಿ ಎಲ್ಲಿದ್ದಾಳೆ ಗೊತ್ತಿಲ್ಲ ಆಕೆ ಹೋಗಿರೋದಕ್ಕೆ ಕಾರಣ ನಾನಲ್ಲ. ಊರಿನ ಜನ ನನ್ನನ್ನು ಒಂದು ರೀತಿ ನೋಡ್ತಿದ್ದಾರೆ. ಆ ಹುಡುಗಿ ಅಪ್ಪ ನನಗೆ ತುಂಬಾ ಬೈದ್ರು, ನನಗೆ ಬದುಕಲು ಇಷ್ಟ ಇಲ್ಲ ಕ್ಷಮಿಸಿ ಎಂದು ತಿಳಿಸಿದ್ದ ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಆ ಯುವತಿ ಕೂಡ ಅಪ್ಪನಿಗೆ ನನ್ನನ್ನು ಹುಡುಕಬೇಡಿ. ಚಂದನ್ ನನಗೆ ಅಣ್ಣನ ರೀತಿ ಅಂತ ಲೆಟರ್ ಬರೆದಿಟ್ಟು ಹೋಗಿದ್ದಳು. ಆದರೆ, ಪೊಲೀಸರು ವಿಚಾರಿಸಿದ್ದಕ್ಕೆ, ಹುಡುಗಿ ಅಪ್ಪ ಬೈದಿದ್ದಕ್ಕೆ, ಊರ ಜನ ಬೇರೆ ರೀತಿ ನೋಡಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ದಲಿತ ಸಂಘಟನೆಗಳು ಹುಡುಗಿ ಅಪ್ಪನ ಕಿರುಕುಳದಿಂದಲೇ ಆ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಅವನ ಸಾವಿಗೆ ನ್ಯಾಯ ಸಿಗಬೇಕು.‌ ಯುವತಿ ಅಪ್ಪನ ಮೇಲೆ ಪ್ರಕರಣ ದಾಖಲಿಸಿ ಎಂದು ಠಾಣೆ ಬಳಿ ಜಮಾಯಿಸಿ ಆಕ್ರೋಶ ಹೊರಹಾಕಿದ್ದಾರೆ. ಈ ಸಂಬಂಧ ಬೀರೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರ ತನಿಖೆಯಿಂದ ಹುಡುಗಿ ಎಲ್ಲಿ ಹೋಗಿದ್ದಾಳೆ. ಯುವಕನ ಸಾವಿಗೆ ಕಾರಣವೇನೆಂಬ ಸತ್ಯ ಹೊರಬರಬೇಕಿದೆ.

Share This Article
Leave a Comment