ಚಿಕ್ಕಮಗಳೂರು : ಮಡಿಕೇರಿಯ ತಡಿಯಂಡಮೋಳ್ ಪರ್ವತ ಚಾರಣದ ವೇಳೆ ಕೇರಳದ ಯುವತಿ ಶರಣ್ಯ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದ್ದು ಸುರಕ್ಷಿತವಾಗಿ ಕುಟುಂಬದ ಜೊತೆ ಸೇರಿಕೊಂಡಿದ್ದಾಳೆ. ಇದೀಗ ಚಿಕ್ಕಮಗಳೂರಿನಲ್ಲಿ ಕೇರಳ ಮೂಲದ ಯುವತಿ ಕುಟುಂಬದ ಜೊತೆ ಪ್ರವಾಸಕ್ಕೆ ಬಂದ ಸಂಧರ್ಭದಲ್ಲಿ ನಾಪತ್ತೆಯಾಗಿದ್ದು, ಹುಡುಕಾಟ ತೀವ್ರಗೊಂಡಿದೆ.


ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಕುಟುಂಬದ ಜೊತೆ ಪ್ರವಾಸಕ್ಕೆ ಬಂದಿದ್ದ ಕೇರಳದ ಪಾಲಕ್ಕಾಡ್ ಮೂಲದ ನಂದನಾ( 22) ಎಂಬ ಯುವತಿ ಚಾರಣದ ವೇಳೆ ನಿಗೂಢವಾಗಿ ನಾಪತ್ತೆಯಾಗಿದ್ದಾಳೆ. ಕುಟುಂಬದ 40 ಸದಸ್ಯರ ತಂಡದಲ್ಲಿ ಭಾಗವಹಿಸಿದ್ದ ನಂದನಾ, ಪರ್ವತದ ಸುಂದರ ತಾಣಗಳನ್ನು ವೀಕ್ಷಿಸುತ್ತಾ ತೆರಳುವಾಗ ತಂಡದಿಂದ ಬೇರ್ಪಟ್ಟು ಹೋಗಿದ್ದಾಳೆ.

ಕುಟುಂಬದ ಸದಸ್ಯರು ಮೇಲಕ್ಕೆ ತಲುಪಿದ ನಂತರವೇ ನಂದನಾ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ. ಅರಣ್ಯ ಇಲಾಖೆ ಮತ್ತು ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪ್ರಸ್ತುತ ಅರಣ್ಯ ಇಲಾಖೆ ಸಿಬ್ಬಂದಿ, ಚಿಕ್ಕಮಗಳೂರು ಗ್ರಾಮಾಂತರ ಕಾರ್ಯಾಚರಣೆ ಸ್ಥಳೀಯರು ಮತ್ತು ತೀವ್ರ ಶೋಧ ನಡೆಸುತ್ತಿದ್ದಾರೆ.

ಚಂದ್ರದ್ರೋಣ ಪರ್ವತವು ದಟ್ಟ ಅರಣ್ಯ ಮತ್ತು ಕಡಿದಾದ ಬೆಟ್ಟಗುಡ್ಡಗಳಿಂದ ಕೂಡಿದ್ದು, ಮಂಜು ಮತ್ತು ಕತ್ತಲು ಶೋಧ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ. ದಾರಿ ತಪ್ಪಿದರೆ ಅಪಾಯದ ಸಾಧ್ಯತೆ ಹೆಚ್ಚಿರುವುದರಿಂದ ಶೋಧ ಕಾರ್ಯವನ್ನು ತೀವ್ರಗೊಳಿಸಲಾಗಿದೆ.



