ಮಂಗಳೂರು : ವಿಶ್ವ ಹಿಂದು ಪರಿಷತ್ ಮತ್ತು ಶ್ರೀ ರಾಮೋತ್ಸವ ಸಮಿತಿ ವತಿಯಿಂದ ಮಾ.26ರಿಂದ 29ರ ತನಕ ನಗರದ ಕದ್ರಿ ಮೈದಾನದಲ್ಲಿ 25ನೇ ವರ್ಷದ ಶ್ರೀ ರಾಮೋತ್ಸವ ಸಂಭ್ರಮವು ವೈದಿಕ ,ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದ್ದು ಕೊನೆಯ ದಿನ ರಾವಣನ ದಹನದ ಮೂಲಕ ಕಾರ್ಯಕ್ರಮ ಸಮಾಪ್ತಿಯಾಗಲಿದೆ ಎಂದು ಶ್ರೀರಾಮೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಡಾ ಎಂ.ಬಿ. ಪುರಾಣಿಕ್ ತಿಳಿಸಿದರು.


ಅವರು ಕದ್ರಿಯ ವಿಶ್ವಶ್ರೀ ಸಭಾಂಗಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ , ಶ್ರೀ ರಾಮನ ಜನ್ಮ ಸ್ಥಾನವಾದ ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣ ಆಗಬೇಕು ಅನ್ನುವ ಸಂಕಲ್ಪದಿಂದ ಮಂಗಳೂರಿನ ಕೇಂದ್ರ ಮೈದಾನದಲ್ಲಿ ಪ್ರಾರಂಭಿಸಿದ ಶ್ರೀ ರಾಮೋತ್ಸವ ಸಮಿತಿಯು ಇಂದು ತನ್ನ 25ನೇ ವರ್ಷದ ರಜತ ಮಹೋತ್ಸವನ್ನು ಆಚರಿಸುತ್ತಿದ್ದು ರಾಮನ ಆದರ್ಶವನ್ನು ಗುಣಗಾನ ಮಾಡುತ್ತಾ ಬಂದಿದೆ ಎಂದರು .

ಮಾರ್ಚ್ 26 ರಂದು ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಿಂದ – ಕದ್ರಿ ಮೈದಾನಕ್ಕೆ ಶ್ರೀ ರಾಮ, ಸೀತಾ, ಲಕ್ಷ್ಮಣ, ಹನುಮಂತ ದೇವರ ರಜತ ಮೂರ್ತಿಗಳ ಭವ್ಯ ಶೋಭಾಯಾತ್ರೆ ಮತ್ತು ಕದ್ರಿ ಮೈದಾನದ ಅಯೋಧ್ಯಾ ಮಂಟಪದಲ್ಲಿ ವೇದಮೂರ್ತಿ ಗಿರಿಧರ ಭಟ್ ಪೌರೋಹಿತ್ಯದಲ್ಲಿ ಶ್ರೀ ದೇವರ ಪ್ರತಿಷ್ಠಾಪನೆ ಮತ್ತು ವೈದಿಕ ವಿಧಿ ವಿಧಾನಗಳೊಂದಿಗೆ ಪ್ರಾರಂಭಗೊಂಡು ಮಾರ್ಚ್ 29 ರ ವರೆಗೆ ನಿರಂತರ ವೈದಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮಾರ್ಚ್ 29 ರಂದು ರಾತ್ರಿ 8:00 ಗಂಟೆಗೆ ಮಹಾಪೂಜೆಯ ನಂತರ ವೈಭವದ ರಾವಣದಹನ ಮತ್ತು ಸುಡುಮದ್ದು ಪ್ರದರ್ಶನ ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಶ್ರೀರಾಮೋತ್ಸವ ಸಮಿತಿಯ ಅಧ್ಯಕ್ಷರಾದ ಸುನಿಲ್ ಅಚಾರ್ , ಕಾರ್ಯಾಧ್ಯಕ್ಷರಾದ ಸುದರ್ಶನ್ ಮೂಡಬಿದ್ರೆ ,ವಿಶ್ವ ಹಿಂದು ಪರಿಷತ್ ಇದರ ಜಿಲ್ಲಾಧ್ಯಕ್ಷರಾದ ಎಚ್.ಕೆ.ಪುರುಷೋತ್ತಮ ,ಸದಸ್ಯರಾದ ಗೋಪಾಲ್ ಕುತ್ತಾರ್ ,ರವಿ ಅಸೈಗೋಳಿ ಮುಂತಾದವರು ಉಪಸ್ಥಿತರಿದ್ದರು .


