ಮೂಡಿಗೆರೆ: ಮನೆ ಮಾಲೀಕನನ್ನು ಬೆದರಿಸಿ ಮಂಗಳೂರು ಮೂಲದ ನಾಲ್ವರು ಯುವಕರು ದರೋಡೆ ಮಾಡಿದ ಘಟನೆ ನಡೆದಿದೆ. ರಾತ್ರಿ 8 ಗಂಟೆ ಸಮಯಕ್ಕೆ ಮನೆಗೆ ನುಗ್ಗಿದ ತಂಡ ಮನೆಯಲ್ಲಿ ಇದ್ದವರಿಗೆ ಖಾರದ ಪುಡಿ ಎರಚಿ ಡಕಾಯಿತಿ ನಡೆಸಲಾಗಿದೆ ಎನ್ನಲಾಗಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮಾಳಿಗನಾಡು ಹೆಬ್ಬಾರಟ್ಟಿ ಗ್ರಾಮದ ಅನಂತ ಹೆಬ್ಬಾರ್ ಎಂಬುವರ ಮನೆಯಲ್ಲಿ ದರೋಡೆ ನಡೆದಿದೆ. ಮನೆ ಮಾಲೀಕ ಅನಂತ ಹೆಬ್ಬಾರ್ ರವರ ಕುತ್ತಿಗೆಗೆ ಲಾಂಗ್ ಇಟ್ಟ ಯುವಕರು 5 ಲಕ್ಷ ರೂಪಾಯಿ ನಗದು, 30 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ದೋಚಿದ್ದಾರೆ.



ಮಾಲೀಕ ಹೆಬ್ಬಾರ್ ರವರನ್ನು ಬಿಡಿಸಲು ಬಂದ ತೋಟದ ಕಾರ್ಮಿಕ ಮಾಣಿ ಭಟ್ಟ ಎಂಬುವರ ಕೈಯನ್ನು ದರೋಡೆಕೊರರು ಕಡಿದಿದ್ದು, ನೆರೆಕರೆಯ ಜನ ಸೇರುತ್ತಿದ್ದಂತೆ ಮೂವರು ಕಾರಿನಲ್ಲಿ ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ. ಓರ್ವ ಅರಮನೆ ತಲಗೂರು ಗ್ರಾಮದ ಅರಣ್ಯದ ಪ್ರದೇಶದಲ್ಲಿ ಅವಿತು ಕೊಂಡಿದ್ದು ಸ್ಥಳಿಯರು ಆತನನ್ನು ಹಿಡಿದಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ, ತಲೆಮರೆಸಿ ಕೊಂಡವರ ಬಂಧನಕ್ಕೆ ಬಲೆ ಬೀಸಿದ್ದಾರೆ.

