ಸಿಟ್ಟಿನಿಂದ ಸದನದಿಂದ ಹೊರ ನಡೆದ ಸ್ಪೀಕರ್ ಯು.ಟಿ.ಖಾದರ್ : ಮೂವರು ಅಧಿಕಾರಿಗಳ ತಲೆದಂಡ..!

Prakhara News
1 Min Read

ಬೆಂಗಳೂರು ; ಕರ್ನಾಟಕ ವಿಧಾನಸಭೆಯಲ್ಲಿ ಶಾಸಕರ ಪ್ರಶ್ನೆಗಳಿಗೆ ಸಚಿವರು ಸಮರ್ಪಕ ಉತ್ತರ ನೀಡದ ಕಾರಣ ಸ್ಪೀಕರ್ ಯು.ಟಿ. ಖಾದರ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪೀಠದಿಂದ ಎದ್ದು ಹೊರನಡೆದ ಸ್ಪೀಕರ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನವೊಲಿಸಿ ಸದನಕ್ಕೆ ಮರಳಿಸಿದರು. ಈ ಸಂದರ್ಭದಲ್ಲಿ ಕಂದಾಯ, ಅಲ್ಪಸಂಖ್ಯಾತ ಮತ್ತು ಸಾರ್ವಜನಿಕ ಕಾರ್ಯ ಇಲಾಖೆಗಳ ಮೂವರು ಹಿರಿಯ ಅಧಿಕಾರಿಗಳ ತಲೆದಂಡವಾಗಿದೆ. ಇದಲ್ಲದೆ ಸಮರ್ಪಕ ಉತ್ತರ ನೀಡದ 3-4 ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳಿಗೆ ನೋಟಿಸ್ ನೀಡುವಂತೆ ಸ್ಪೀಕರ್ ಸೂಚಿಸಿದ್ದಾರೆ.

ವಿಧಾನಸಭೆ ಅಧಿವೇಶನದ ವೇಳೆ ಪಿಡಬ್ಲ್ಯುಡಿ, ಪಶುಸಂಗೋಪನೆ, ಸಾರಿಗೆ, ಐಟಿ-ಬಿಟಿ, ಡಿಪಿಎಆರ್ ಮತ್ತು ಕಂದಾಯ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳು ಶಾಸಕರ ಲಿಖಿತ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡದಿದ್ದಕ್ಕೆ ಸ್ಪೀಕರ್ ಗರಂ ಆಗಿದ್ದರು. “ಶಾಸಕರು ಪ್ರಶ್ನೆ ಕೇಳುವುದು ಜನರ ಹಕ್ಕು. ಅದಕ್ಕೆ ಸರಿಯಾದ ಉತ್ತರ ಬರಬೇಕು” ಎಂದು ಖಾದರ್ ಅವರು ತೀವ್ರವಾಗಿ ಪ್ರತಿಕ್ರಿಯಿಸಿದರು. ಇದರಿಂದಾಗಿ ಸದನ ಮುಂದೂಡಲ್ಪಟ್ಟಿತು ಮತ್ತು ಸ್ಪೀಕರ್ ಪೀಠದಿಂದ ಎದ್ದು ಹೊರನಡೆದರು.

ಸ್ಪೀಕರ್ ಆಕ್ರೋಶದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪೀಕರ್ ಕಚೇರಿಗೆ ತೆರಳಿ ಸಂಧಾನ ನಡೆಸಿದರು. ವಿಪಕ್ಷ ನಾಯಕರು ಸೇರಿದಂತೆ ಎಲ್ಲಾ ಪಕ್ಷಗಳ ನಾಯಕರೊಂದಿಗೆ ಚರ್ಚಿಸಿ, ಎಲ್ಲಾ ಶಾಸಕರ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡುವ ಬಗ್ಗೆ ಭರವಸೆ ನೀಡಿದರು. ಇದರ ನಂತರ ಸ್ಪೀಕರ್ ಸದನಕ್ಕೆ ಮರಳಿ ಕಲಾಪ ಪುನಾರಂಭಿಸಿದರು.

ಸ್ಪೀಕರ್ ಸೂಚನೆಯಂತೆ ಮೂವರು ಹಿರಿಯ ಅಧಿಕಾರಿಗಳ ತಲೆದಂಡವಾಗಿದ್ದು, ಉಳಿದ 3-4 ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳಿಗೆ ನೋಟಿಸ್ ಜಾರಿಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ. ಮಧ್ಯಾಹ್ನದ ವೇಳೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಎಲ್ಲಾ ಪ್ರಧಾನ ಕಾರ್ಯದರ್ಶಿಗಳ ಸಭೆ ಕರೆದು ಈ ವಿಚಾರದಲ್ಲಿ ಸೂಚನೆ ನೀಡಿದ್ದಾರೆ.

Share This Article
Leave a Comment