ಮಂಗಳೂರು : ಮಹಿಳೆಯರಿಗೆ ಗೌರವ ನೀಡುವುದು ಕೇವಲ ಕರ್ತವ್ಯ ಅಲ್ಲ. ಅದು ನಮ್ಮ ಸಂಸ್ಕಾರ. ಮಹಿಳಾ ಸಬಲೀಕರಣವು ಸುಸ್ಥಿರ ಹಾಗೂ ಸಶಕ್ತ ಸಮಾಜ ನಿರ್ಮಾಣಕ್ಕೆ ಅಡಿಪಾಯವಾಗಿದೆ ಎಂದು ದ.ಕ.ಜಿಲ್ಲಾ ರೆಡ್ಕ್ರಾಸ್ ಸಮಿತಿಯ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಹೇಳಿದರು.


ದ.ಕ.ಜಿಲ್ಲಾ ರೆಡ್ಕ್ರಾಸ್ ಸಮಿತಿ ವತಿಯಿಂದ ರೆಡ್ಕ್ರಾಸ್ ಶತಮಾನೋತ್ಸವ ಕಟ್ಟಡದ ಪ್ರೇರಣಾ ಸಭಾಂಗಣದಲ್ಲಿ ಸೋಮವಾರ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಳೆಯ ಮಕ್ಕಳ ಶಿಕ್ಷಣದ ಜತೆ ಮಾನವೀಯ ಸೇವೆಯಲ್ಲಿ ತೊಡಗಿರುವ ಅಂಗನವಾಡಿ ಶಿಕ್ಷಕಿಯರಿಗೆ ಆರೋಗ್ಯ ಶಿಬಿರ ಸಹಿತ ವಿವಿಧ ಸೌಲಭ್ಯ ಒದಗಿಸಲು ಜಿಲ್ಲಾ ರೆಡ್ಕ್ರಾಸ್ ಹೆಚ್ಚಿನ ಆದ್ಯತೆ ನೀಡಲಿದೆ ಎಂದು ಅವರು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಉಸ್ಮಾನ್ ಕಾರ್ಯಕ್ರಮ ಉದ್ಘಾಟಿಸಿದರು. ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿ ಶ್ವೇತಾ.ಎನ್. ಮುಖ್ಯ ಅತಿಥಿಯಾಗಿದ್ದರು. ನಗರದ ೫೦ ಅಂಗನವಾಡಿಗಳಿಗೆ ರೆಡ್ಕ್ರಾಸ್ ವತಿಯಿಂದ ಸಲಕರಣೆಗಳನ್ನು ವಿತರಿಸಲಾಯಿತು. ರೆಡ್ಕ್ರಾಸ್ ಜಿಲ್ಲಾ ಸಮಿತಿಯ ಖಜಾಂಜಿ ಗುರುದತ್ ನಾಯಕ್ ಉಪಸ್ಥಿತರಿದ್ದರು. ರೆಡ್ಕ್ರಾಸ್ ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಡಾ.ಸಚ್ಚಿದಾನಂದ ರೈ ಸ್ವಾಗತಿಸಿ, ನಿರ್ದೇಶಕ ಪಿ.ಬಿ.ಹರೀಶ್ ರೈ ವಂದಿಸಿದರು. ಕಾರ್ಯದರ್ಶಿ ಕಿಶೋರ್ಚಂದ್ರ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.




