ಡಿಮೋನಾ: ಇಸ್ರೇಲ್‌ನ ‘ಲಿಟಲ್ ಇಂಡಿಯಾ’ ಮೇಲೆ ಇರಾನ್‌ ಕ್ಷಿಪಣಿ ದಾಳಿ 33 ಮಂದಿಗೆ ಗಾಯ..

Prakhara News
2 Min Read
Oplus_0

ಡಿಮೋನಾ: ಇರಾನ್ ಯುದ್ಧ 3 ವಾರಗಳಿಂದ ನಡೆಯುತ್ತಿದೆ. ಆದರೂ ಯುದ್ಧದ ತೀವ್ರತೆ ಕಡಿಮೆಯಾಗುತ್ತಿಲ್ಲ. ಅಮೆರಿಕ ಮತ್ತು ಇಸ್ರೇಲ್ ಇನ್ನೂ ಇರಾನ್ ಮೇಲೆ ಬಾಂಬ್‌ಗಳ ಮಳೆ ಸುರಿಸುತ್ತಿವೆ. ಮತ್ತೊಂದೆಡೆ, ಪ್ರತೀಕಾರವಾಗಿ, ಇರಾನ್ ಗಲ್ಫ್ ರಾಷ್ಟ್ರಗಳ ಮೇಲೆ ಹಾಗೂ ಇಸ್ರೇಲ್ ಮೇಲೆ ದಾಳಿ ಮಾಡುತ್ತಿದೆ. ಈ ಮಧ್ಯೆ ಇರಾನ್ , ಇಸ್ರೇಲ್ ‘ಪರಮಾಣು ನಗರ’ ಎಂದು ಹೇಳಲಾಗುವ ಡಿಮೋನಾ ಮೇಲೆ ದಾಳಿ ಮಾಡಿದೆ. ಡಿಮೋನಾವನ್ನು ಇಸ್ರೇಲ್‌ನಲ್ಲಿ ‘ಲಿಟಲ್ ಇಂಡಿಯಾ’ ಎಂದು ಕರೆಯಲಾಗುತ್ತದೆ. ಈ ದಾಳಿಯಲ್ಲಿ ಒಟ್ಟು 33 ಜನರು ಗಾಯಗೊಂಡಿದ್ದು, ಇವರೆಲ್ಲರೂ ಭಾರತೀಯ ಮೂಲದವರಾಗಿದ್ದಾರೆ.

‘ಲಿಟಲ್ ಇಂಡಿಯಾ‘ ಎಂದು ಏಕೆ ಕರೆಯುತ್ತಾರೆ

ಇಸ್ರೇಲ್‌ನ ದಕ್ಷಿಣ ಭಾಗದಲ್ಲಿರುವ ಡಿಮೋನಾ ಪಟ್ಟಣವು ಭಾರತೀಯ ಯಹೂದಿಗಳ ಸಾಂಸ್ಕೃತಿಕ ಕೇಂದ್ರವಾಗಿದೆ. ಇಲ್ಲಿ ಸುಮಾರು 7,500ಕ್ಕೂ ಹೆಚ್ಚು ಭಾರತೀಯ ಮೂಲದ ಯಹೂದಿಗಳು ನೆಲೆಸಿದ್ದಾರೆ. ಇವರು ಶತಮಾನಗಳ ಕಾಲ ಭಾರತದ ಮಹಾರಾಷ್ಟ್ರ, ಕೇರಳ, ಕೋಲ್ಕತ್ತಾ, ಮಿಜೋರಾಂ ಮತ್ತು ಮಣಿಪುರದಲ್ಲಿ ವಾಸವಿದ್ದರು. 1948ರಲ್ಲಿ ಇಸ್ರೇಲ್ ದೇಶ ಉದಯವಾದ ನಂತರ, ವಿಶೇಷವಾಗಿ 1960ರ ದಶಕದಲ್ಲಿ ಇವರೆಲ್ಲರೂ ವಲಸೆ ಹೋಗಿದ್ದರು. ಇಂದಿಗೂ ಇವರು ಮರಾಠಿ, ಹಿಂದಿ ಮತ್ತು ಮಲಯಾಳಂ ಭಾಷೆಗಳನ್ನು ಮಾತನಾಡುತ್ತಾರೆ.

ಇರಾನ್ ಉಡಾಯಿಸಿದ ಕ್ಷಿಪಣಿಯೊಂದು ಡಿಮೋನಾದ ಜನವಸತಿ ಪ್ರದೇಶಕ್ಕೆ ನೇರವಾಗಿ ಅಪ್ಪಳಿಸಿದೆ. ಈ ಸ್ಫೋಟದ ತೀವ್ರತೆಗೆ ಭಾರತೀಯ ಮೂಲದ 33 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ 10 ವರ್ಷದ ಬಾಲಕ ಮತ್ತು 40 ವರ್ಷದ ಮಹಿಳೆಯ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ಈ ‘ಲಿಟಲ್ ಇಂಡಿಯಾ’ ಪ್ರದೇಶವು ಇಸ್ರೇಲ್‌ನಲ್ಲಿದ್ದರೂ ಅಲ್ಲಿನ ವಾತಾವರಣ ಭಾರತದ ಪಟ್ಟಣದಂತಿರುತ್ತದೆ. ಇಲ್ಲಿನ ಜನರು ಕ್ರಿಕೆಟ್ ಆಡುತ್ತಾ, ಬಾಲಿವುಡ್ ಸಿನಿಮಾಗಳ ಹಾಡುಗಳನ್ನು ಕೇಳುತ್ತಾ ಸಂಭ್ರಮಿಸುತ್ತಾರೆ. ಇವರ ಆಹಾರ ಪದ್ಧತಿಯಲ್ಲೂ ಭಾರತೀಯತೆಯೇ ಎದ್ದು ಕಾಣುತ್ತದೆ. ಗುಲಾಬ್ ಜಾಮೂನ್, ಸೋನ್ ಪಾಪಡಿ, ಚಾಟ್ಸ್ ಮತ್ತು ಬೇಲ್ ಪುರಿ ಇವರ ನೆಚ್ಚಿನ ತಿಂಡಿಗಳು. ಇಂತಹ ಶಾಂತಿಪ್ರಿಯ ಸಮುದಾಯದ ಮೇಲೆ ದಾಳಿ ನಡೆದಿರುವುದು ಜಾಗತಿಕ ಮಟ್ಟದಲ್ಲಿ ಖಂಡನೆಗೆ ಒಳಗಾಗಿದೆ.

1960ರ ದಶಕದಲ್ಲಿ ಮುಂಬೈನಿಂದ ಹೋದ ‘ಬೆನೆ ಇಸ್ರೇಲ್’ ಸಮುದಾಯದವರು ಮತ್ತು ಕೇರಳದ ‘ಕೊಚ್ಚಿ ಯಹೂದಿಗಳು’ ಡಿಮೋನಾದಲ್ಲಿ ನೆಲೆ ನಿಂತರು. ನಂತರದ ದಿನಗಳಲ್ಲಿ ಈಶಾನ್ಯ ಭಾರತದ ಮಿಜೋರಾಂ ಮತ್ತು ಮಣಿಪುರದಿಂದಲೂ ಯಹೂದಿಗಳು ಇಲ್ಲಿಗೆ ಬಂದು ಸೇರಿಕೊಂಡರು. ಇಸ್ರೇಲ್ ದೇಶದ ರಕ್ಷಣೆ ಮತ್ತು ಅಭಿವೃದ್ಧಿಯಲ್ಲಿ ಈ ಭಾರತೀಯ ಯಹೂದಿಗಳ ಪಾತ್ರ ಬಹಳ ದೊಡ್ಡದಿದೆ. ಈಗ ಯುದ್ಧದ ಕಿಚ್ಚು ಇವರ ಮನೆಯಂಗಳಕ್ಕೆ ಬಂದಿರುವುದು ಭಾರತದಲ್ಲಿರುವ ಇವರ ಸಂಬಂಧಿಕರಲ್ಲೂ ಆತಂಕ ಮೂಡಿಸಿದೆ.

Share This Article
Leave a Comment