ಮಂಗಳೂರು : ಮೂಲ್ಕಿ-ಹೆಜಮಾಡಿಯ ಶ್ಯಾನುಭೋಗ್ ಕುದ್ರುವಿನಲ್ಲಿ ಏಪ್ರಿಲ್ 10 ರಿಂದ 12ರವರೆಗೆ ಜಿಪಿಎಲ್ ಉತ್ಸವನ್ನು ದಶಮಾನೋತ್ಸವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಜಿಪಿಎಲ್ ಉತ್ಸವ ಸಮಿತಿಯ ಸದಸ್ಯರಾದ ಕಿರಣ್ ಶೆಣೈ ತಿಳಿಸಿದರು.


ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , 2017ರಲ್ಲಿ ಆರಂಭವಾದ ಈ ಉತ್ಸವ ಗೌಡ ಸಾರಸ್ವತ ಬ್ರಾಹ್ಮಣ ಸಮಾಜವನ್ನು ಒಗ್ಗೂಡಿಸುವ ಉದ್ದೇಶ ಹೊಂದಿದ್ದು, ಈ ಬಾರಿ ಮೂರು ದಿನಗಳ ಕಾಲ ಕ್ರಿಕೆಟ್ ಪಂದ್ಯಾಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿದೆ ಎಂದರು.

ಕರ್ನಾಟಕ, ಕೇರಳ, ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳಿಂದ 16 ತಂಡಗಳು ಭಾಗವಹಿಸುವ ಕ್ರಿಕೆಟ್ ಟೂರ್ನಮೆಂಟ್ ಪ್ರಮುಖ ಆಕರ್ಷಣೆಯಾಗಿದ್ದು, ವಿಜೇತರಿಗೆ ನಗದು, ಟ್ರೋಫಿ ಹಾಗೂ ಬಹುಮಾನಗಳು ನೀಡಲಾಗುತ್ತದೆ. ಜೊತೆಗೆ ಫುಡ್ ಕೋರ್ಟ್, ಬೋಟಿಂಗ್, ಕಿಡ್ಸ್ ಝೋನ್, ಶಾಂಭವಿ ಆರತಿ, ಪೆಟ್ ಶೋ, ಕ್ರೀಡಾ ಕಾರ್ನಿವಲ್, ಒಂಟೆ-ಕುದುರೆ ಸವಾರಿ ಹಾಗೂ ಪ್ಲೀ ಮಾರುಕಟ್ಟೆ ವ್ಯವಸ್ಥೆ ಇರಲಿದೆ ಎಂದರು.

ಸಾಂಸ್ಕೃತಿಕ ವೇದಿಕೆಯಲ್ಲಿ ನೃತ್ಯ, ಸಂಗೀತ, ನಾಟಕ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಜಿಂಭೆ ಸಂಗೀತ, ಕೊಂಕಣಿ ನಾಟಕ ಹಾಗೂ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದರು .
ಪತ್ರಿಕಾಗೋಷ್ಠಿಯಲ್ಲಿ ಜಿಪಿಎಲ್ ಉತ್ಸವ ಸಮಿತಿಯ ಸದಸ್ಯರಾದ ಗೋಪಾಲಕೃಷ್ಣ ಭಟ್ ,ರಜತ್ ಭಂಡಾರ್ಕರ್ ಮತ್ತು ನಾಗೇಂದ್ರ ಶೆಣೈ ಉಪಸ್ಥಿತರಿದ್ದರು.



