ಕಾಸರಗೋಡು: ಆಟವಾಡುತ್ತಿದ್ದಾಗ ಧ್ವಜಸ್ತಂಭದ ಹಗ್ಗ ಕುತ್ತಿಗೆಗೆ ಬಿಗಿದು 11 ವರ್ಷದ ಬಾಲಕ ದಾರುಣ ಸಾವು..!

Prakhara News
1 Min Read

ಕಾಸರಗೋಡು: ಮನೆಯ ಸಮೀಪದ ಅಂಗನವಾಡಿ ಮೈದಾನದಲ್ಲಿ ಆಟವಾಡುತ್ತಿದ್ದಾಗ ಧ್ವಜಸ್ತಂಭದ ಹಗ್ಗ ಕುತ್ತಿಗೆಗೆ ಸಿಲುಕಿ 11 ವರ್ಷದ ಬಾಲಕನೋರ್ವ ದಾರುಣವಾಗಿ ಸಾವನ್ನಪ್ಪಿದ ಘಟನೆ ಕಾಸರಗೋಡಿನ ಮಡಿಕೈ ಪಂಚಾಯತ್ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ.

ಚೇರಂತಲಾ ವಾರ್ಡ್‌ನ ನಿವಾಸಿ, ಪಿಕ್-ಅಪ್ ಚಾಲಕ ರಾಜೇಶ್ ಮತ್ತು ನೀತು ದಂಪತಿಯ ಏಕೈಕ ಪುತ್ರ ಅನೇಕ್ (11) ಮೃತಪಟ್ಟ ದುರ್ದೈವಿ. ಈತ ಕನ್ಹಿರಪೊಯಿಲ್‌ನ ಸರ್ಕಾರಿ ಪ್ರೌಢಶಾಲೆಯಲ್ಲಿ 6ನೇ ತರಗತಿ ವ್ಯಾಸಂಗ ಮಾಡುತ್ತಿದ್ದ.

ಶಾಲೆಯಿಂದ ಮನೆಗೆ ಬಂದಿದ್ದ ಅನೇಕ್, ಸಂಜೆ 4.45 ರ ಸುಮಾರಿಗೆ ನಂದನ್‌ಕುಳಿ ಅಂಗನವಾಡಿ ಬಳಿಯ ಮೈದಾನಕ್ಕೆ ಆಟವಾಡಲು ತೆರಳಿದ್ದ. ಸಾಮಾನ್ಯವಾಗಿ ಈತನೊಂದಿಗೆ ಆಟವಾಡುತ್ತಿದ್ದ ನೆರೆಹೊರೆಯ ಮಕ್ಕಳು ಶಾಲೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರಿಂದ ಅನೇಕ್ ಮೈದಾನದಲ್ಲಿ ಒಬ್ಬನೇ ಇದ್ದ. ಧ್ವಜಸ್ತಂಭದ ಬಳಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಅದರ ಹಗ್ಗ ಕುತ್ತಿಗೆಗೆ ಬಿಗಿದುಕೊಂಡಿದೆ. ಇದೇ ವೇಳೆ ಆ ಮಾರ್ಗವಾಗಿ ತೆರಳುತ್ತಿದ್ದ ಆಟೋರಿಕ್ಷಾ ಚಾಲಕರೊಬ್ಬರು ಧ್ವಜಸ್ತಂಭದ ಬಳಿ ಬಾಲಕ ಬಿದ್ದಿರುವುದನ್ನು ಗಮನಿಸಿ, ತಕ್ಷಣವೇ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳೀಯರು ಧ್ವಜಸ್ತಂಭಕ್ಕೆ ಸಿಲುಕಿದ್ದ ಬಾಲಕನನ್ನು ಬಿಡಿಸಿ ಆಸ್ಪತ್ರೆಗೆ ಸಾಗಿಸಿದರಾದರೂ, ಪರೀಕ್ಷಿಸಿದ ವೈದ್ಯರು ಬಾಲಕ ಈಗಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಬಾಲಕನ ಅಕಾಲಿಕ ಸಾವು ಕುಟುಂಬಸ್ಥರು ಹಾಗೂ ಗ್ರಾಮಸ್ಥರಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಞಂಗಾಡ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share This Article
Leave a Comment