
ಪುತ್ತೂರು: ಕರ್ನಾಟಕದ ಕಾಂಗ್ರೆಸ್ ಸರಕಾರ ಎಲ್ಲಾ ರಂಗದಲ್ಲಿಯೂ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಸಮಾಜದ ಎಲ್ಲಾ ವರ್ಗದ ಜನರಿಗೂ ಸೌಲಭ್ಯವನ್ನು ಕಲ್ಪಿಸಲು ಅನುದಾನವನ್ನು ಒದಗಿಸುತ್ತಿದ್ದು, ಸಣ್ಣ ನೀರಾವರಿ ಇಲಾಖೆಯಮೂಲಕ ಪುತ್ತೂರು ವಿಧಾನಸಭಾ ಕ್ಷೇತ್ರದ 58 ಮಂದಿ ಪರಿಶಿಷ್ಟ ಜಾತಿಮತ್ತು ಪಂಗಡದ ಫಲಾನುಭವಿ ಕೃಷಿಕರಿಗೆ ಕೊಳವೆ ಬಾವಿಯನ್ನು ಮಂಜೂರು ಮಾಡಿದೆ. ಸಮಾಜದಲ್ಲಿರುವ ಕಟ್ಟಕಡೇಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಸಿಗಬೇಕು ಎಂಬ ನಿಟ್ಟಿನಲ್ಲಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ಸೌಲಭ್ಯ ಹಂಚಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿ ಅರ್ಹ ಕುಟುಂಬಗಳಿಗೆ ಈ ಸೌಲಭ್ಯವನ್ನು ನೀಡಲಾಗುವುದು ಎಂದು ಶಾಸಕ ಅಶೋಕ್ ರೈ ಹೇಳಿದರು.



ಪ.ಜಾತಿ ಮತ್ತು ಪ.ಪಂಗಡದ ಕೃಷಿಕ ಕುಟುಂಬಗಳಿಗೆ ನೆರವಾಗಲೆಂದು ಸರಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ಕೃಷಿಗೆ ನೀರಿನ ಕೊರತೆ ಇದ್ದ ಕುಟುಂಬಗಳಿಗೆ ಕೊಳವೆ ಬಾವಿಯನ್ನು ನೀಡಲಾಗಿದೆ ಎಂದ ಶಾಸಕರು ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ದಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿದೆ. ಗ್ಯಾರಂಟಿ ಯೋಜನೆಗಳು ಕುಟುಂಬಗಳನ್ನು ಬೆಳಗಿಸಿದರೆ ಇತರೆ ಅನುದಾನಗಳು ಸಾಮೂಹಿಕ ಸಂತೃಪ್ತಿಯನ್ನು ಸೃಷ್ಟಿಸುತ್ತಿದೆ. ದ ಕ ಜಿಲ್ಲೆಯಲ್ಲಿ ಪುತ್ತೂರಿಗೆ ಅತ್ಯಂತ ಹೆಚ್ಚು ಅನುದಾನ ಬರುತ್ತಿರುವುದು ಸಂತಸಕ್ಕೆ ಎಡೆಮಾಡಿದೆ. ಈ ಬಾರಿಯ ಬಜೆಟ್ ನಲ್ಲಿ ಪುತ್ತೂರಿಗೆ ವಿವಿಧ ಯೋಜನೆಗಳು ಬರುವ ನಿರೀಕ್ಷೆ ಇದೆ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರಾದ ಡಾ.ರಘು, ವಲಯ ಅಧ್ಯಕ್ಷರುಗಳಾದ ಮೋನಪ್ಪ ಗೌಡ, ಅನಿಮಿನೇಜಸ್, ಮುರಳೀದರ್ ರೈ ಮಟಂತಬೆಟ್ಟು, ಕೋಡಿಂಬಾಡಿ ಗ್ರಾಪಂ ಉಪಾಧ್ಯಕ್ಷೆ ಮಲ್ಲಿಕಾ, ಪ್ರಹ್ಲಾದ್ ಬೆಳ್ಳಿಪ್ಪಾಡಿ,ಅಬಿಷೇಕ್ ಬೆಳ್ಳಿಪ್ಪಾಡಿ,ಉಲ್ಲಾಸ್ ಕೋಟ್ಯಾನ್,ಕಾರ್ತಿಕ್ ರೈ ಬೆಳ್ಳಿಪ್ಪಾಡಿ ಮೊದಲಾದವರು ಉಪಸ್ಥಿತರಿದ್ದರು.