
ಮಂಗಳೂರು: ರಸ್ತೆ ಬದಿ ನಿಲ್ಲಿಸಿದ್ದ ಟ್ಯಾಂಕರ್ ಚಲಿಸಿದ ಪರಿಣಾಮ ರಾಷ್ಟ್ರೀಯ ಹೆದ್ದಾರಿ ದಾಟಿ ಹೋಟೆಲ್ ಗೆ ನುಗ್ಗಿ ಕಾರು, ಬೈಕ್ ಗಳನ್ನು ಜಖಂಗೊಳಿಸಿದ ಘಟನೆ ಹೊನ್ನಕಟ್ಟೆ ಜಂಕ್ಷನ್ ನಲ್ಲಿ ನಡೆದಿದೆ.



ಕುಳಾಯಿಗುಡ್ಡೆಗೆ ಹೋಗುವ ರಸ್ತೆಯಲ್ಲಿ ಟ್ಯಾಂಕರ್ ನಿಲ್ಲಿಸಿ ಅದರ ಚಾಲಕ ಹೊಟೇಲ್ಗೆ ತೆರಳಿದ್ದರು. ಈ ವೇಳೆ ಲಾರಿ ಏಕಾಏಕಿ ಇಳಿಜಾರಾಗಿರುವ ರಸ್ತೆಯಾಗಿ ರಾಷ್ಟೀಯ ಹೆದ್ದಾರಿ 66ನ್ನು ದಾಟಿಕೊಂಡು ಹೊಟೇಲ್ಗೆ ಢಿಕ್ಕಿ ಹೊಡೆದಿದೆ. ಅಲ್ಲದೆ, ಈ ವೇಳೆ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಕಾರು, ಆಟೋ ರಿಕ್ಷಾ ಹಾಗೂ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ.


ಘಟನೆಯಿಂದ ಎರಡು ಆಟೋ ರಿಕ್ಷಾಗಳು, ಎರಡು ಕಾರು ಹಾಗೂ ಒಂದು ದ್ವಿಚಕ್ರ ವಾಹನ ಜಖಂಗೊಂಡಿದೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರ ವಿಭಾಗದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ