ಪುತ್ತೂರು ತಾಲ್ಲೂಕು ಅರಿಯಡ್ಕ ಗ್ರಾಮದ ಕೌಡಿಚ್ಚಾರು ಸಮೀಪದ ಕುರುಂಜ ಮಣ್ಣಾಪು ಎಂಬಲ್ಲಿ ಕಾಡು ಹಂದಿಯೊಂದು ದಾಳಿ ನಡೆಸಿದ ಪರಿಣಾಮ ಸ್ಕೂಟರ್ ಸವಾರ ಕುಂಬ್ರ ಪೆಟ್ರೋಲ್ ಪಂಪ್ ನ ಮ್ಯಾನೇಜರ್ ಆಗಿರುವ ಧನುಷ್ ಎಂಬವರು ತೀವ್ರ ಗಾಯಗೊಂಡ ಘಟನೆ ಆಗಸ್ಟ್ 20ರ ಬೆಳಗ್ಗಿನ ಜಾವ ನಡೆದಿದೆ. ಧನುಷ್ ಅವರು ಎಂದಿನಂತೆ ಬೆಳಿಗ್ಗೆ ಸ್ಕೂಟರ್ನಲ್ಲಿ ಕುಂಬ್ರ ಪೆಟ್ರೋಲ್ ಪಂಪ್ಗೆ ಬರುತ್ತಿದ್ದ ವೇಳೆ ಏಕಾ ಏಕಿ ಕಾಡು ಹಂದಿಯೊಂದು ಧನುಷ್ ಅವರು ಚಲಾಯಿಸುತ್ತಿದ್ದ ಸ್ಕೂಟರ್ ಮೇಲೆ ದಾಳಿ ನಡೆಸಿದೆ. ಈ ವೇಳೆ ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಧನುಷ್ ಅವರ ಮೇಲೆ ಎರಗಿ ಅವರ ಬಲ ಕೈಗೆ ಕಚ್ಚಿ ಗಂಭೀರ ಗಾಯಗೊಳಿಸಿದ್ದಲ್ಲದೆ ಇತರ ದೇಹದ ಭಾಗಗಳಿಗೆ ಗಾಯಗೊಳಿಸಿದೆ. ಗಾಯಾಳುವನ್ನು 108 ಆ್ಯಂಬುಲೆನ್ಸ್ ಮೂಲಕ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.


