ಸುಳ್ಯ: ಸುಳ್ಯ ಪಯಸ್ವಿನಿ ನದಿಯಲ್ಲಿನ ಗುಂಡಿಗಳಲ್ಲಿ ನೀರಿಗೆ ವಿಷ ಬೆರೆಸಿ ಮೀನು ಹಿಡಿಯುವ ಕಿಡಿಗೇಡಿಗಳು ಮೀನುಗಳ ಮಾರಣ ಹೋಮ ನಡೆಸುತ್ತಿರುವ ಘಟನೆ ಮಂಡೆ ಕೋಲಿನ ಮೂರೂರಿನಲ್ಲಿ ನಡೆದಿದೆ. ಮಂಡೆಕೋಲು ಗ್ರಾಮದ ಗಡಿ ಪ್ರದೇಶವಾದ ಮುರೂರು ಭಾಗದಲ್ಲಿ ಪಯಸ್ವಿನಿ ನದಿಯ ಹೊಂಡಗಳಲ್ಲಿರುವ ಮೀನುಗಳನ್ನು ಹಿಡಿಯಲು ಕಿಡಿಗೇಡಿ ಗಳು ನೀರಿಗೆ ವಿಷ ಬೆರೆಸುವ ಕೃತ್ಯ ನಡೆಸಿದ್ದಾರೆ. ಇದರಿಂದಾಗಿ ನೀರಿನ ಹೊಂಡಗಳಲ್ಲಿ ಮೀನುಗಳು ಸತ್ತು ತೇಲುತ್ತಿರುವುದು ಕಂಡು ಬಂದಿದೆ. ಅಲ್ಪ ಸ್ವಲ್ಪ ನೀರು ಇರುವ ಹೊಂಡದಲ್ಲಿ ವಿಷ ಬೆರೆಸಿ ಮೀನು ಹಿಡಿಯುವುದರಿಂದ ಈ ರೀತಿ ಮೀನುಗಳು ಸಾಯಲು ಕಾರಣ ವಾಗುತ್ತಿದೆ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ನದಿಯಲ್ಲಿನ ಅಲ್ಪಸ್ವಲ್ಪ ಸಂಗ್ರಹವಾಗಿರುವ ನೀರಿಗೆ ವಿಷ ಬೆರೆಸಿ ಮೀನು ಹಿಡಿಯುವುದರಿಂದ ಜನರಿಗೆ ಮಾತ್ರವಲ್ಲದೇ ಕಾಡು ಪ್ರಾಣಿಗಳಿಗೂ ತೊಂದರೆ ಆಗು ತ್ತದೆ. ಕಾಡಿನಲ್ಲಿರುವ ಪ್ರಾಣಿಗಳು ನೀರು ಹುಡುಕುತ್ತಾ ನದಿಗಳಿಗೆ ಇಳಿಯುವುದು ಸಾಮಾನ್ಯ. ಈ ಸಂದರ್ಭ ನದಿಯಲ್ಲಿ ನೀರು ವಿಷಯುಕ್ತವಾದರೆ ಪ್ರಾಣಿಗಳಿಗೂ ಅಪಾಯ ಕಟ್ಟಿಟ್ಟ ಬುತ್ತಿ. ಇದಕ್ಕೆ ಆಡಳಿತ ವ್ಯವಸ್ಥೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಮೀನುಗಳು ಸತ್ತು ತೇಲುತ್ತಿರುವುದರಿಂದ ಆ ಪ್ರದೇಶದ ಎಲ್ಲೆಡೆ ದುರ್ವಾಸನೆ ಬೀರುತ್ತದೆ. ನದಿಯಲ್ಲಿರುವ ನೀರನ್ನು ಸಮೀಪದ ‘ಜನರು ದಿನ ನಿತ್ಯದ ಅಗತ್ಯತೆ ಗಳಿಗೆ ಬಳಕೆ ಮಾಡುತ್ತಾರೆ. ಇದೀಗ ನೀರು ಕಲುಷಿತಗೊಂಡರೆ ಜನರಿಗೂ ಸಮಸ್ಯೆಯಾಗುತ್ತಿದೆ. ಆದ್ದರಿಂದ ನದಿಯ ನೀರನ್ನು ಕಲುಷಿತಗೊಳಿಸುವವರನ್ನು ಮೀನು ಹಿಡಿಯುವವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.


