ಕಾಸರಗೋಡು : ರಕ್ತಸಂಬಂಧಗಳು ಮತ್ತು ಸಿದ್ಧಾಂತಗಳ ಮಿತಿಗಳನ್ನು ಮೀರಿ ಮಾನವೀಯತೆ ಧರ್ಮವೇ ಶ್ರೇಷ್ಠ ಎಂದು ಸಾರುವ ಅಪರೂಪದ ಘಟನೆಯೊಂದು ಜಿಲ್ಲೆಯ ಮಂಜೇಶ್ವರದಲ್ಲಿ ನಡೆದಿದೆ. ಬಾಯಿ ಕ್ಯಾನ್ಸರ್ನಿಂದ ಬಳಲುತ್ತಿದ್ದ ಮಾಜಿ ಆರ್ಎಸ್ಎಸ್ ಕಾರ್ಯಕರ್ತನನ್ನು ಸಾವಿನಲ್ಲೂ ಸ್ವಂತ ಕುಟುಂಬಸ್ಥರು ಕೈಬಿಟ್ಟಾಗ, ಮುಸ್ಲಿಂ ಲೀಗ್ನ ಮಹಿಳಾ ನಾಯಕಿಯೊಬ್ಬರು ಮಗಳ ಸ್ಥಾನದಲ್ಲಿ ನಿಂತು ಹಿಂದೂ ಪದ್ಧತಿಯ ಪ್ರಕಾರವೇ ಚಿತೆಗೆ ಕೊಳ್ಳಿ ಇಟ್ಟು ಅಂತಿಮ ಸಂಸ್ಕಾರ ನೆರವೇರಿಸಿದ್ದಾರೆ.


ಮಂಜೇಶ್ವರ ತಾಲ್ಲೂಕಿನ ಮೀಂಜ ಗ್ರಾಮ ಪಂಚಾಯತ್ನ ಚಿಗುರುಪಾದೆ ಮೂಲದ ದಿನಗೂಲಿ ಕಾರ್ಮಿಕ ನಾರಾಯಣನ್ ತೊಟ್ಟಥೋಡಿ (64) ಗುರುವಾರ ರಾತ್ರಿ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ನಿಧನರಾದರು. ಅವರು ಸುಮಾರು 20 ವರ್ಷಗಳ ಹಿಂದಿನವರೆಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ (ಆರ್ಎಸ್ಎಸ್) ಸಕ್ರಿಯರಾಗಿದ್ದರು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಹಳ್ಳಿಯ ಪಾಳುಬಿದ್ದ ಅಂಗಡಿಯೊಂದರ ವರಾಂಡಾದಲ್ಲಿ ಅನಾಥವಾಗಿ ಬಿದ್ದಿದ್ದಾಗ, ಸ್ಥಳೀಯ ವಾರ್ಡ್ ಸದಸ್ಯ ಶೆರಿಫ್ ಚಿನಾಲ್ ಅವರ ಮಾಹಿತಿ ಮೇರೆಗೆ ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯೆ ಹಾಗೂ ಸಮಾಜ ಸೇವಕಿ ಇರ್ಫಾನಾ ಇಕ್ಬಾಲ್ ಅವರು ನಾರಾಯಣನ್ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು.ನಾರಾಯಣನ್ ಅವರಿಗೆ ತೀವ್ರ ಹಂತದ ಬಾಯಿ ಕ್ಯಾನ್ಸರ್ ಇದ್ದ ಕಾರಣ ಅವರಿಂದ ಬರುತ್ತಿದ್ದ ವಾಸನೆಗೆ ಹೆದರಿ ಸ್ವಂತ ಸಹೋದರಿ ಕಮಲಾ, ಇಬ್ಬರು ಪತ್ನಿಯರು ಮತ್ತು ಮಕ್ಕಳು ಯಾರೂ ಅವರನ್ನು ನೋಡಿಕೊಳ್ಳಲು ಮುಂದೆ ಬರಲಿಲ್ಲ. ಅವರ ನಿಧನದ ನಂತರ ಮಂಜೇಶ್ವರ ಪೊಲೀಸರು ಮಾಹಿತಿ ನೀಡಿದರೂ ಶವವನ್ನು ಸ್ವೀಕರಿಸಲು ನಿರಾಕರಿಸಿದ ಕುಟುಂಬಸ್ಥರು, ಇರ್ಫಾನಾ ಅವರಿಗೇ ಅಂತ್ಯಕ್ರಿಯೆ ನಡೆಸಲು ಲಿಖಿತ ಒಪ್ಪಿಗೆ ಪತ್ರ ನೀಡಿದ್ದರು.

ಕುಟುಂಬಸ್ಥರ ಲಿಖಿತ ಒಪ್ಪಿಗೆಯ ನಂತರ ಶವವನ್ನು ಉಪ್ಪಳದ ಚೆರುಗೋಳಿ ಸಾರ್ವಜನಿಕ ಸ್ಮಶಾನಕ್ಕೆ ತರಲಾಯಿತು. ಸಮಾಜ ಸೇವಕಿ ಇರ್ಫಾನಾ ಇಕ್ಬಾಲ್ ಅವರು ತಾವೇ ಸ್ವತಃ ಮುಂದೆ ನಿಂತು ಹಿಂದೂ ಧರ್ಮದ ವಿಧಿವಿಧಾನಗಳ ಪ್ರಕಾರ ಚಿತೆಗೆ ಬೆಂಕಿ ಹಚ್ಚುವ ಮೂಲಕ ನಾರಾಯಣನ್ ಅವರ ಆತ್ಮಕ್ಕೆ ಶಾಂತಿ ಕೋರಿದರು. ಈ ಮಾನವೀಯ ಕಾರ್ಯಕ್ಕೆ ಸಮಾಜ ಸೇವಕರಾದ ರಿಯಾಸ್ ಪಿಲಾಥರ, ಮೆಹಮೂದ್ ಕೈಕಂಬ ಮತ್ತು ಸೇವಾ ಭಾರತಿಯ ಸ್ವಯಂಸೇವಕ ರಘು ಸಾಥ್ ನೀಡಿದರು. ಸದ್ಯ ಇರ್ಫಾನಾ ಅವರು ಉಪ್ಪಳದಲ್ಲಿ ‘ಶೇಖ್ ಜಾಯೆದ್ ವೃದ್ಧಾಶ್ರಮ’ ನಡೆಸುತ್ತಿದ್ದು, 50ಕ್ಕೂ ಹೆಚ್ಚು ಅನಾಥ ವೃದ್ಧರಿಗೆ ಆಶ್ರಯ ನೀಡಿದ್ದಾರೆ.



