ವಿಟ್ಲ: ಪಿಕಪ್ ವಾಹನದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಹಿಂಸಾತ್ಮಕವಾಗಿ ಜಾನುವಾರುಗಳನ್ನು ಕಟುಕತನಕ್ಕೆ ಸಾಗಿಸುತ್ತಿದ್ದ ಅಕ್ರಮ ಜಾಲವನ್ನು ವಿಟ್ಲ ಪೊಲೀಸರು ಭೇದಿಸಿದ್ದಾರೆ. ಕಾರ್ಯಾಚರಣೆ ವೇಳೆ ಪೊಲೀಸರ ಪ್ರಾಣಕ್ಕೆ ಅಪಾಯ ಉಂಟುಮಾಡುವ ರೀತಿಯಲ್ಲಿ ಕಾರು ಚಲಾಯಿಸಿ ಪ್ರಮುಖ ಆರೋಪಿಯೊಬ್ಬ ತಲೆಮರೆಸಿಕೊಂಡಿದ್ದು, ಪಿಕ್ಅಪ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.


ಬಾಳೆಪುಣಿ ನಿವಾಸಿ ಹನೀಫ್ (44) ಬಂಧಿತ ಪಿಕ್ಅಪ್ ಚಾಲಕ. ಕಾರಿನಲ್ಲಿ ಬಂದು ಪೊಲೀಸರ ಮೇಲೆಯೇ ವಾಹನ ಚಲಾಯಿಸಿ ಪರಾರಿಯಾದ ಆರೋಪಿಯನ್ನು ಬಶೀರ್ ಬಂತಾ ಎಂದು ಗುರುತಿಸಲಾಗಿದೆ.

ಮೇ 21ರ ಗುರುವಾರ ಬೆಳಗ್ಗೆ ಪಂಜರಕೋಡಿ ಎಂಬಲ್ಲಿ ಪಿಕಪ್ ವಾಹನವೊಂದರಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸಲಾಗುತ್ತಿದೆ ಎಂಬ ಪಕ್ಕಾ ಮಾಹಿತಿ ವಿಟ್ಲ ಪೊಲೀಸರಿಗೆ ಲಭಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ತೆರಳಿ ನಿಗಾ ಇರಿಸಿದ್ದರು. ಈ ವೇಳೆ ಅನುಮಾನಾಸ್ಪದವಾಗಿ ಬಂದ ಪಿಕ್ಅಪ್ ವಾಹನವನ್ನು ಪೊಲೀಸರು ತಡೆದು ನಿಲ್ಲಿಸಿದ್ದಾರೆ.

ಪೊಲೀಸರ ಮೇಲೆ ಕಾರು ಚಲಾಯಿಸಿದ ಆರೋಪಿ: ಪೊಲೀಸರು ಪಿಕ್ಅಪ್ ವಾಹನವನ್ನು ತಡೆಯುತ್ತಿದ್ದಂತೆ, ಅದಕ್ಕೆ ಬೆಂಗಾವಲಾಗಿ (Escort) ಕಾರಿನಲ್ಲಿ ಬಂದಿದ್ದ ಆರೋಪಿ ಬಶೀರ್, ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿಯ ಪ್ರಾಣಕ್ಕೆ ಅಪಾಯವಾಗುವಂತೆ ಅತಿವೇಗವಾಗಿ ಕಾರನ್ನು ನುಗ್ಗಿಸಿಕೊಂಡು ಹೋಗಿ ಅಲ್ಲಿಂದ ಪರಾರಿಯಾಗಿದ್ದಾನೆ.
ಬಳಿಕ ಪೊಲೀಸರು ಜಾನುವಾರುಗಳಿದ್ದ ಪಿಕ್ಅಪ್ ವಾಹನವನ್ನು ಕೂಲಂಕಷವಾಗಿ ಪರಿಶೀಲಿಸಿದಾಗ, ಎರಡು ಜಾನುವಾರುಗಳನ್ನು ಅತ್ಯಂತ ಹಿಂಸಾತ್ಮಕವಾಗಿ ಕಟ್ಟಿ ಹಾಕಿರುವುದು ಪತ್ತೆಯಾಗಿದೆ. ಈ ಬಗ್ಗೆ ಚಾಲಕ ಹನೀಫ್ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಯಾವುದೇ ಅಧಿಕೃತ ಪರವಾನಿಗೆ ಇಲ್ಲದೆ ಜಾನುವಾರುಗಳನ್ನು ವಧೆ ಮಾಡುವ ಉದ್ದೇಶದಿಂದಲೇ ಸಾಗಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ. ಪೊಲೀಸರು ಕೃತ್ಯಕ್ಕೆ ಬಳಸಿದ ಪಿಕ್ಅಪ್ ವಾಹನ ಹಾಗೂ ಎರಡು ಜಾನುವಾರುಗಳನ್ನು ವಶಕ್ಕೆ ಪಡೆದಿದ್ದಾರೆ. ತಲೆಮರೆಸಿಕೊಂಡಿರುವ ಬಶೀರ್ಗಾಗಿ ಪತ್ತೆ ಕಾರ್ಯ ಮುಂದುವರಿದಿದ್ದು, ವಿಟ್ಲ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧವೂ ಗಂಭೀರ ಪ್ರಕರಣ ದಾಖಲಾಗಿದೆ.


