ಮಣಿಪಾಲ: ನಗರದ ಪೊಲೀಸ್ ಠಾಣೆಯಲ್ಲಿ ದಾಖಲಾದ ಮಾದಕ ವಸ್ತು ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ನಾಲ್ಕನೇ ಆರೋಪಿಯನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.


ಕೇರಳ ರಾಜ್ಯದ ಮಲ್ಲಪುರಂ ಮೂಲದ ಪ್ರಸ್ತುತ ಮಣಿಪಾಲದಲ್ಲಿ ವಾಸವಾಗಿರುವ ಅಜ್ಮಲ್(26) ಬಂಧಿತ ಆರೋಪಿ. 2025ರ ಆ.16ರಂದು ಮಣಿಪಾಲ ಈಶ್ವರ ನಗರದ ರೂಮ್ನಲ್ಲಿ ಗಾಂಜಾ ಹಾಗೂ ಎಲ್ಎಸ್ಡಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಆಪ್ಶಿನ್ ಮತ್ತು ಶಿವನಿಧಿ ಆಚಾರ್ಯ ಎಂಬವರನ್ನು ಮಣಿಪಾಲ ಪೊಲೀಸರು ಬಂಧಿಸಿದ್ದರು.

ಈ ಪ್ರಕರಣದ ತನಿಖೆ ಮುಂದುವರೆಸಿದ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿದ ಮತ್ತೋರ್ವ ಆರೋಪಿ ಕೇರಳ ಮೂಲದ ಮನೀಶ್ ಎಂಬಾತನನ್ನು 2025ರ ಆ.17ರಂದು ಬಂಧಿಸ ಲಾಗಿತ್ತು. ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ 4ನೇ ಆರೋಪಿ ಅಜ್ಮಲ್ನನ್ನು ಪೊಲೀಸರು 2026ರ ಫೆ.4ರಂದು ಮಣಿಪಾಲ ಸಿಂಡಿಕೇಟ್ ಸರ್ಕಲ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಬಂಧಿಸಿದ್ದಾರೆ.
ಈತನಿಂದ ಸುಮಾರು 1 ಲಕ್ಷ ರೂ. ಮೌಲ್ಯದ 2084 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಈತ ಗಾಂಜಾವನ್ನು ಸರಬರಾಜು ಮಾಡಿದ 5 ವ್ಯಕ್ತಿಗಳನ್ನು ವಶಕ್ಕೆ ಪಡೆದಿದ್ದು, ಇವರು ಗಾಂಜಾ ಸೇವಿಸಿದ ಬಗ್ಗೆ ದೃಢಪಟ್ಟಿದೆ. ಗಾಂಜಾ ಸೇವಿಸಿದ ಬಗ್ಗೆ ಈ ಐವರ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

