ಮಂಗಳೂರು : ತುಳುನಾಡಿನ ಪ್ರೇಕ್ಷಕರು ನಾಟಕ ಮತ್ತು ಸಿನಿಮಾದಲ್ಲಿ ಹೆಚ್ಚಾಗಿ ಹಾಸ್ಯವನ್ನು ಬಯಸುತ್ತಾರೆ. ಕೇವಲ ಹಾಸ್ಯದಿಂದ ತುಳು ಚಿತ್ರರಂಗ ಬೆಳೆಯಲು ಸಾಧ್ಯವಿಲ್ಲ. ಹಾಸ್ಯದ ಜತೆಗೆ ಗಂಭೀರ ಕಥಾವಸ್ತು ಇರುವ ಸಿನಿಮಾಗಳನ್ನು ಪ್ರೋತ್ಸಾಹಿಸ ಬೇಕು ಎಂದು ಜನಪ್ರಿಯ ನಟ ನವೀನ್ ಡಿ.ಪಡೀಲ್ ಹೇಳಿದರು.



ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಅವರು ‘ಮಂಗಳೂರು ಪ್ರೆಸ್ಕ್ಲಬ್ ಗೌರವ ಅತಿಥಿ’ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಅವರು ತುಳು ಸಿನಿಮಾದಲ್ಲಿ ಇತ್ತೀಚೆಗೆ ಹೊಸಬರು ಹಾಸ್ಯದ ಜತೆಗೆ ಉತ್ತಮ ಕಥಾವಸ್ತು ಕೂಡ ನೀಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ಹಾಸ್ಯದ ಜತೆಗೆ ಒಂದು ಗಂಭೀರ ವಸ್ತು ವಿಷಯಕ್ಕೆ ಆದ್ಯತೆ ನೀಡಿರುವ ಕಾರಣಕ್ಕೆ ಮಲಯಾಳಂನ ಚಿತ್ರಗಳು ಅತೀ ಹೆಚ್ಚು ಪ್ರೇಕ್ಷಕರನ್ನು ಹೊಂದಿದೆ ಎಂದರು.

ಇತ್ತೀಚಿನ ರಿಯಾಲಿಟಿ ಶೋ, ಚಲನಚಿತ್ರಗಳಲ್ಲಿ ನೈಜ ಹಾಸ್ಯಕ್ಕೆ ಬೆಲೆ ಇಲ್ಲ. ಗಂಭೀರ ವಸ್ತು ವಿಷಯದ ಸಂದರ್ಭದಲ್ಲಿ ಹಾಸ್ಯ ಮಾಡಲೇಬಾರದು. ಇದುವರೆಗೂ ಆ ನಿಯಮ ಪಾಲಿಸಿಕೊಂಡು ಬಂದಿದ್ದೇನೆ. ಇತ್ತೀಚೆಗೆ ನಾನು ಪೋಷಕ ಪಾತ್ರಗಳನ್ನು ಹೆಚ್ಚಾಗಿ ಮಾಡುತ್ತಿದ್ದು ಅದಕ್ಕೆ ನಾಡಿನ ಹಿರಿಯ ಕಲಾವಿದರಿಂದ ಮೆಚ್ಚುಗೆ ಸಿಗುತ್ತಿದೆ. ಮತ್ತೆ ಹಾಸ್ಯ ಪಾತ್ರಗಳನ್ನೇ ಮಾಡಬೇಕೆ ಎಂಬ ಗೊಂದಲ ನನ್ನಲ್ಲಿದೆ ಎಂದರು.
ನಮ್ಮಲ್ಲಿ ಸೌಹಾರ್ದತೆ, ಹೊಂದಾಣಿಕೆ ಬೇಕು. ಇದೇ ವಿಷಯವನ್ನಿಟ್ಟುಕೊಂಡು ‘ನಿರೆಕರೆ’ ಸಿನೆಮಾ ಮಾಡುತ್ತಿದ್ದೇವೆ. ಸಿನೆಮಾದಲ್ಲಿ ದೈವರಾಧನೆ ತೋರಿಸುವುದು ತಪ್ಪಲ್ಲ. ಆದರೆ ಅದನ್ನು ಇದ್ದ ಹಾಗೆ ತೋರಿಸಬೇಕು. ವಿಕ್ಕೃತವಾಗಿ ತೋರಿಸಬಾರದು. ‘ಕಾಂತಾರ’ ಸಿನೆಮಾದಲ್ಲಿ ದೈವಾರಾಧನೆ ತೋರಿಸಿದ ಬಗ್ಗೆ ಕೆಲವರು ಟ್ರೋಲ್ ಮಾಡಿರಬಹುದು. ಆದರೆ ‘ಕಾಂತಾರ’ದಿಂದಾಗಿ ದೈವಾರಾಧನೆಯ
ಶಕ್ತಿ ಏನೆಂಬುದು ಎಲ್ಲರಿಗೂ ಗೊತ್ತಾಗಿದೆ ಎಂದು ಪಡೀಲ್ ಹೇಳಿದರು.
ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸದ್ಯ ಜಗನ್ನಾಥ ಶೆಟ್ಟಿ ಬಾಳ ಕಾರ್ಯಕ್ರಮ, ಉದ್ಘಾಟಿಸಿದರು. ಮಂಗಳೂರು ಪ್ರೆಸ್ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ
ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್, ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ಮಾಜಿ ಅಧ್ಯಕ್ಷ ಅನ್ನು ಮಂಗಳೂರು ಉಪಸ್ಥಿತರಿದ್ದರು. ಪುಷ್ಪರಾಜ್ ಬಿ.ಎನ್. ವಂದಿಸಿದರು. ಪತ್ರಕರ್ತರ ಸಂಘದ ಪ್ರಧಾನ
ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಕಾರ್ಯಕ್ರಮ ನಿರೂಪಿಸಿದರು.