
ಮಂಗಳೂರು: ಕಾಪಿ ಕ್ಯಾಂಡಿ ಗಂಟಲಲ್ಲಿ ಸಿಲುಕಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ 2 ವರ್ಷದ ಮಗುವಿನ ಜೀವವನ್ನು ವೈದ್ಯರು ರಕ್ಷಿಸಿದ್ದಾರೆ.



2 ವರ್ಷದ ಮಗುವಿನ ಗಂಟಲಲ್ಲಿ ಕಾಪಿ ಕ್ಯಾಂಡಿ ಸಿಲುಕಿ, ಉಸಿರಾಟ ನಡೆಸಲಾಗದೇ ಸಮಸ್ಯೆಗೆ ಸಿಲುಕಿತ್ತು. ಮಗುವಿನ ಪೋಷಕರು ಘಟನೆ ನಡೆದ 10-15 ನಿಮಿಷದಲ್ಲಿ ಕಕ್ಕಿಂಜೆ ಶ್ರೀಕೃಷ್ಣ ಆಸ್ಪತ್ರೆಗೆ ಆಸ್ಪತ್ರೆಗೆ ಕರೆತಂದಿದ್ದಾರೆ.


ತಕ್ಷಣ ಕಾರ್ಯಪ್ರವೃತ್ತರಾದ ಕಕ್ಕಿಂಜೆ ಶ್ರೀಕೃಷ್ಣ ಆಸ್ಪತ್ರೆಯ KMC ತುರ್ತುನಿಗಾ ಘಟಕದ ವೈದ್ಯರ ತಂಡ ಮಗುವಿನ ಉಸಿರಾಟಕ್ಕೆ ತಡೆಯಾಗಿದ್ದ ಕ್ಯಾಂಡಿಯನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಆಸ್ಪತ್ರೆಗೆ ಮಗುವನ್ನು ಕರೆತಂದಾಗ ಮಗು ಬಹಳ ನಿಶ್ಯಕ್ತಗೊಂಡಿತ್ತು. ಆಮ್ಲಜನಕ ಪ್ರಮಾಣವೂ ಅಪಾಯಮಟ್ಟದಲ್ಲಿ ಕಡಿಮೆಯಾಗಿತ್ತು. ಉಸಿರಾಟ ನಡೆಸಲು. ಕೂಡ ಕಷ್ಟವಾಗುತ್ತಿತ್ತು.
ತಕ್ಷಣ ಆಸ್ಪತ್ರೆಯ ತಜ್ಞ ವೈದ್ಯರು ಪರೀಕ್ಷೆ ನಡೆಸಿ ‘ವಿಶೇಷವಾದ ಚೋಕಿಂಗ್ ರೆಸ್ಕೊ ವಿಧಾನವನ್ನು’ ಕೈಗೊಂಡರು. ಆದರೂ ಮಗುವಿನ ಸ್ಥಿತಿ ಸುಧಾರಿಸದಿದ್ದಾಗ ಕ್ರಮಬದ್ಧವಾಗಿ ಬೆನ್ನಿಗೆ ಮತ್ತು ಹೊಟ್ಟೆಯ ಭಾಗದಲ್ಲಿ ಒತ್ತಡ ಹಾಕುವ ಮೂಲಕ ಸಿಲುಕಿದ್ದ ಕ್ಯಾಂಡಿಯನ್ನು ವಾಂತಿ ಮಾಡಿಸಿ ಹೊರ ತೆಗೆಯಲಾಗಿದೆ. ಆ ಬಳಿಕ ಮಗುವಿನ ಉಸಿರಾಟ ಸುಗಮವಾಗಿದೆ.
ಬಳಿಕ ನಿಗಾ ಘಟಕದಲ್ಲಿ ಇರಿಸಿ ಮಗುವಿಗೆ ಆರೈಕೆ ಮಾಡಲಾಗಿದೆ. ಜತೆಗೆ ಎಕ್ಸ್ರೇ ಮೂಲಕ ಮತ್ತೆ ಯಾವುದೇ ರೀತಿಯ ಸಮಸ್ಯೆ ಇದೆಯೇ ಎಂದು ಕೂಡ ಪರೀಕ್ಷಿಸಲಾಗಿದೆ. ಸದ್ಯ ಮಗು ಅಪಾಯದಿಂದ ಪಾರಾಗಿದೆ.