ಉಪ್ಪಿನಂಗಡಿ: ವಿವಾಹ ಪೂರ್ವ ಶೂಟಿಂಗ್ ನಡೆಸಲೆಂದು ಬೆಂಗಳೂರಿನಿಂದ ಉಡುಪಿಗೆ ಪ್ರಯಾಣಿಸುತ್ತಿದ್ದ ತಂಡವಿದ್ದ ಕಾರೊಂದು ಕೋಣಾಲು ಗ್ರಾಮದ ಕರ್ಬ ಸಂಕ ಎನ್ನುವಲ್ಲಿ ಅಪಘಾತಕ್ಕೀಡಾಗಿ ಭಾವಿ ವಧುವರರ ಸಹಿತ ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಸಂಭವಿಸಿದೆ.
ಬೆಂಗಳೂರಿನ ನೆಲಮಂಗಲದ ನಿವಾಸಿಗರಾದ ವಿವಾಹ ನಿಶ್ಚಿತಾರ್ಥವಾಗಿದ್ದ ಭಾವಿ ವರ ಲೋಕೇಶ್ ಹಾಗೂ ಭಾವಿ ವಧು ಉಷಾ ಮತ್ತಾಕೆಯ ಬ್ಯೂಟೀಷಿಯನ್ ಪದ್ಮಾ ಹಾಗೂ ಕಾರು ಚಾಲಕ ಪುರುಷೋತ್ತಮ ಅವರಿದ್ದ ತಂಡ ಬೆಂಗಳೂರಿನಿಂದ ಕಾರಿನಲ್ಲಿ ಪ್ರಯಾಣಿಸಿ ಮೇಲುಕೋಟೆಯಲ್ಲಿ ಶೂಟಿಂಗ್ ಮುಗಿಸಿ ಉಡುಪಿಯತ್ತ ಪ್ರಯಾಣಿಸುತ್ತಿದ್ದಾಗ ದಾರಿ ಮಧ್ಯದ ಕಡಬ ತಾಲೂಕು ಕೋಣಾಲು ಗ್ರಾಮದ ಕರ್ಬ ಸಂಕದಲ್ಲಿ ರಾತ್ರಿ ವೇಳೆ ಕಾರು ಅಪಘಾತಕ್ಕೀಡಾಗಿದೆ.
ಕಾರಿನಲ್ಲಿದ್ದ ನಾಲ್ವರಿಗೂ ಗಾಯಗಳಾಗಿದೆ. ಈ ತಂಡದ ಶೂಟಿಂಗ್ ಸಿಬಂದಿ ಬೇರೊಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದು, ಭಾವಿ ಮದುಮಕ್ಕಳ ಕಾರು ಅಪಘಾತಕ್ಕೀಡಾಗಿರುವುದನ್ನು ಕಂಡು ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸುವಲ್ಲಿ ನೆರವಾದರು. ಅಪಘಾತದಿಂದ ಭಾವಿ ಮದುಮಕ್ಕಳ ಕಾಲಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಉಪ್ಪಿನಂಗಡಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ.